ನವದೆಹಲಿ, ಡಿ. 21 (DaijiworldNews/AK): ಸುದೀರ್ಘ ಕಾಲ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ ಪಕ್ಷ ಅಸ್ಸಾಂ ಹಾಗೂ ಈಶಾನ್ಯ ಪ್ರದೇಶಗಳನ್ನು ಕಡೆಗಣಿಸಿದೆ. ವಲಸಿಗರನ್ನು ಬರಲು ಬಿಟ್ಟು ಪ್ರಾದೇಶೀಕ ಭದ್ರತೆಗೆ ಧಕ್ಕೆ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಆರೋಪಕ್ಕೆ ಕಾಂಗ್ರೆಸ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.

ಅಸ್ಸಾಮ್ನಲ್ಲಿ ಡಬಲ್ ಎಂಜಿನ್ ಸರ್ಕಾರ ಹೊಂದಿರುವ ಬಿಜೆಪಿ, ಆ ರಾಜ್ಯದಲ್ಲಿ ಆಗಿರುವ ತನ್ನ ವೈಫಲ್ಯಗಳಿಗೆ ಜವಾಬ್ದಾರಿ ಹೊರುವುದು ಬಿಟ್ಟು ವಿಪಕ್ಷಗಳತ್ತಲೇ ಬೊಟ್ಟು ಮಾಡುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಅದ್ಹೇಗೆ ವಿಪಕ್ಷಗಳ ಮೇಲೆ ಆಪಾದಿಸುತ್ತಾರೆ? ಕೇಂದ್ರದಲ್ಲಿ ಅವರ ಸರ್ಕಾರ ಇದೆ. ಅಸ್ಸಾಮ್ನಲ್ಲೂ ಅವರದ್ದೇ ಸರ್ಕಾರ ಇದೆ. ಡಬಲ್ ಎಂಜಿನ್ ಸರ್ಕಾರ ಆಗಿದೆ. ಅವರು ರಾಜ್ಯವನ್ನು ರಕ್ಷಿಸಲು ವಿಫಲರಾದರೆ, ವಿಪಕ್ಷಗಳನ್ನು ಹೇಗೆ ದೂಷಿಸುತ್ತಾರೆ? ನಾವಾ ಅಲ್ಲಿ ಆಡಳಿತ ನಡೆಸುತ್ತಿರುವುದು?’ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಬಿಜೆಪಿಯನ್ನು ಪ್ರಶ್ನೆ ಮಾಡಿದ್ದಾರೆ.
ನರೇಂದ್ರ ಮೋದಿ ಅವರು ಡಿ. 20 ರಂದು ಅಸ್ಸಾಮ್ ರಾಜಧಾನಿ ಗುವಾಹಟಿಯ ಏರ್ಪೋರ್ಟ್ನ ಹೊಸ ಟರ್ಮಿನಲ್ ಉದ್ಘಾಟನೆ ಮಾಡಿ ಮಾತನಾಡುತ್ತಾ, ಅಸ್ಸಾಮ್ ಹಾಗೂ ಈಶಾನ್ಯವನ್ನು ಕಾಂಗ್ರೆಸ್ ಪಕ್ಷ ನಿರ್ಲಕ್ಷಿಸುತ್ತಾ ಬಂದಿತ್ತೆಂದು ಆಪಾದಿಸಿದ್ದರು. ದಶಕಗಳ ಕಾಲ ಈಶಾನ್ಯ ಪ್ರದೇಶಗಳಿಗೆ ನುಸುಳುಕೋರರನ್ನು ಬರಲು ಬಿಟ್ಟು ಅಲ್ಲಿನ ಭದ್ರತೆ ಮತ್ತು ಸಾಂಸ್ಕೃತಿಕ ಗುರುತನ್ನು ದುರ್ಬಲಗೊಳಿಸಲಾಗಿದೆ. ಇದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಮೋದಿ ಹೇಳಿದ್ದರು.