ಬೆಂಗಳೂರು, ಡಿ. 15 (DaijiworldNews/AA): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಅಪಘಾತ ರಹಿತ ಸೇವೆ ಸಲ್ಲಿಸುವ ಚಾಲಕರಿಗೆ ಪ್ರೋತ್ಸಾಹ ಧನ ಹೆಚ್ಚಿಸಿ ಆದೇಶ ಹೊರಡಿಸಿದೆ.

ಈ ಕುರಿತು ಆದೇಶ ಹೊರಡಿಸಿರುವ ಕೆಎಸ್ಆರ್ಟಿಸಿ ಎಂಡಿ ಅಕ್ರಂ ಪಾಷಾ ಅವರು, "ಈ ಮೊದಲು ಸಿಎಂ ಚಿನ್ನದ ಪದಕ ಪಡೆದ ಚಾಲಕರಿಗೆ 5,000 ರೂ. ನಗದು ಪುರಸ್ಕಾರವಿತ್ತು. ಈ ನಗದು ಮೊತ್ತವನ್ನು ಇದೀಗ 10,000ರೂ.ಗೆ ಹೆಚ್ಚಿಸಿದೆ ಹಾಗೂ ಚಿನ್ನದ ಪದಕ ಪಡೆದ ಚಾಲಕರಿಗೆ ಮಾಸಿಕ ಭತ್ಯೆ 500ರೂ. - 1,000ರೂ.ಗೆ ಏರಿಕೆ ಮಾಡಿದೆ" ಎಂದು ತಿಳಿಸಿದ್ದಾರೆ.
"ಇನ್ನೂ ಬೆಳ್ಳಿ ಪದಕ ಪಡೆದ ಚಾಲಕರಿಗೆ ನೀಡಲಾಗುತ್ತಿದ್ದ 2,500 ರೂ. ನಗದು ಪುರಸ್ಕಾರವನ್ನು ಇದೀಗ 5,000 ರೂ.ಗೆ ಹೆಚ್ಚಿಸಲಾಗಿದೆ. ಜೊತೆಗೆ ಮಾಸಿಕ ಭತ್ಯೆ 250ರೂ.ಯಿಂದ 500 ರೂ.ಗೆ ಏರಿಕೆ ಮಾಡಲಾಗಿದೆ. ಈ ಪರಿಷ್ಕ್ರತ ನಗದು ಪುರಸ್ಕಾರ ಜನವರಿ 1, 2026 ರಿಂದ ಜಾರಿಯಾಗಲಿದೆ" ಎಂದು ಮಾಹಿತಿ ನೀಡಿದ್ದಾರೆ.