ನವದೆಹಲಿ, ಡಿ. 15 (DaijiworldNews/AK): ಇದೀಗ ಜಗತ್ತಿನ ಅತ್ಯಂತ ಮಾಲಿನ್ಯ ನಗರಗಳಲ್ಲಿ ದೆಹಲಿ ಒಂದಾಗಿದೆ. ದೆಹಲಿಯಲ್ಲಿ ಉಸಿರಾಡಲು ಕೂಡ ಕಷ್ಟವಾಗುವಂತೆ ಗಾಳಿಯ ಗುಣಮಟ್ಟ ಕೆಟ್ಟದಾಗಿರುವುದರಿಂದ ಯುನೈಟೆಡ್ ಕಿಂಗ್ಡಮ್, ಸಿಂಗಾಪುರ ಮತ್ತು ಕೆನಡಾ ದೇಶಗಳು ಉತ್ತರ ಭಾರತಕ್ಕೆ ಪ್ರಯಾಣಿಸುವ ತಮ್ಮ ನಾಗರಿಕರಿಗೆ ಪ್ರಯಾಣದ ಸಲಹೆಗಳನ್ನು ನೀಡಿವೆ.

ದೆಹಲಿಯಲ್ಲಿ ಮಾಲಿನ್ಯ ಮತ್ತು ಮಂಜು ಹೆಚ್ಚಾಗಿರುವುದರಿಂದ ಗೋಚರತೆಯ ಸಮಸ್ಯೆಯಿಂದಾಗಿ ವಿಮಾನಗಳ ಹಾರಾಟದಲ್ಲಿಯೂ ಅಡಚಣೆಯಾಗುತ್ತಿದೆ. ಇದಕ್ಕೂ ಸಿದ್ಧವಾಗಿರಬೇಕು ಎಂದು ಸಿಂಗಾಪುರ ತನ್ನ ದೇಶದ ನಾಗರಿಕರಿಗೆ ಸಲಹೆ ನೀಡಿದೆ.
ಈ ಬಗ್ಗೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹಲವಾರು ವಿಮಾನಯಾನ ಸಂಸ್ಥೆಗಳು ಸಲಹೆಗಳನ್ನು ನೀಡಿರುವುದಾಗಿ ಸಿಂಗಾಪುರ ತನ್ನ ಸಲಹೆಯಲ್ಲಿ ತಿಳಿಸಿದೆ. ಪ್ರಯಾಣಿಕರು ನವೀಕರಣಗಳಿಗಾಗಿ ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ಪರಿಶೀಲಿಸಲು ಸೂಚಿಸಲಾಗಿದೆ.
ಈಗಾಗಲೇ ದೆಹಲಿಯಲ್ಲಿ ಅಧಿಕಾರಿಗಳು ನಿರ್ಮಾಣ ಮತ್ತು ಕೈಗಾರಿಕಾ ಕೆಲಸಗಳನ್ನು ನಿರ್ಬಂಧಿಸಿದ್ದಾರೆ. ಶಾಲೆಗಳು ಮತ್ತು ಕಚೇರಿಗಳಿಗೆ ಹೈಬ್ರಿಡ್ ರೀತಿ ಕಾರ್ಯ ನಿರ್ವಹಿಸಲು ಸಲಹೆ ನೀಡಲಾಗಿದೆ. ದೆಹಲಿ ಅಧಿಕಾರಿಗಳು ನಿವಾಸಿಗಳನ್ನು, ವಿಶೇಷವಾಗಿ ಮಕ್ಕಳು ಮತ್ತು ಉಸಿರಾಟದ ಅಥವಾ ಹೃದಯ ಸಂಬಂಧಿ ಕಾಯಿಲೆ ಇರುವ ಜನರು ಮನೆಯೊಳಗೆ ಇರಲು ಮತ್ತು ಹೊರಗೆ ಹೋಗುವಾಗ ಮಾಸ್ಕ್ ಧರಿಸಲು ಸೂಚನೆ ನೀಡಿದ್ದಾರೆ. ದೆಹಲಿಯ ಈ ಪರಿಸ್ಥಿತಿಯ ಬಗ್ಗೆಯೂ ಸಿಂಗಾಪುರ ತನ್ನ ಪ್ರಜೆಗಳು ಗಮನಿಸುವಂತೆ ಸಲಹೆ ನೀಡಿದೆ.
ಇಂಗ್ಲೆಂಡ್ ದೇಶ ಕೂಡ ಪ್ರಯಾಣ ಸಲಹೆಯನ್ನು ನೀಡಿದ್ದು, ಗರ್ಭಿಣಿಯರು ಮತ್ತು ಹೃದಯ ಕಾಯಿಲೆ ಇರುವ ಜನರು ಭಾರತಕ್ಕೆ ಭೇಟಿ ನೀಡುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು ಎಂದು ಹೇಳಿದೆ. ಕೆನಡಾ ಕೂಡ ಇದೇ ರೀತಿಯ ಸಲಹೆಯನ್ನು ನೀಡಿದ್ದು, ಭಾರತಕ್ಕೆ ಭೇಟಿ ನೀಡುವ ಮೊದಲು ಪ್ರಯಾಣಿಕರು ನಿಯಮಿತವಾಗಿ ಗಾಳಿಯ ಗುಣಮಟ್ಟದ ಮಟ್ಟವನ್ನು ಪರಿಶೀಲಿಸುವಂತೆ ಸಲಹೆ ನೀಡಿದೆ.