ಬೆಂಗಳೂರು,ನ. 28 (DaijiworldNews/ AK): ಪತ್ರಿಕಾ ವೃತ್ತಿಯಲ್ಲಿ ಪತ್ರಕರ್ತೆಯರ ಪ್ರಮಾಣ ಹೆಚ್ಚಾದಷ್ಟೂ ಆತ್ಮವಂಚನೆಯ ಪ್ರಮಾಣ ಕಡಿಮೆಯಾಗಿ ವಿದ್ಯಮಾನಗಳನ್ನು ಅಂತಃಕರಣದಿಂದ ಕಾಣುವ ಪ್ರಮಾಣವೂ ಹೆಚ್ಚಾಗುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.

ಕರ್ನಾಟಕ ಪತ್ರಕರ್ತೆಯರ ಸಂಘ ಗಾಂಧಿ ಭವನದಲ್ಲಿ ಆಯೋಜಿಸಿದ್ದ "ಶ್ರೀ ಸಿದ್ದರಾಮಯ್ಯ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ" ವನ್ನು ಉದ್ಘಾಟಿಸಿ ಸುಶೀಲ ಸುಬ್ರಮಣ್ಯ ಮತ್ತು ಎಂ.ಎಚ್.ನೀಳಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಪತ್ರಿಕಾ ವೃತ್ತಿಯಲ್ಲಿ ಪತ್ರಕರ್ತೆಯರ ಪ್ರಮಾಣ ಹೆಚ್ಚಾದಷ್ಟೂ ಆತ್ಮವಂಚನೆಯ ಪ್ರಮಾಣ ಕಡಿಮೆ ಆಗುತ್ತದೆ. ಏಕೆಂದರೆ, ಅಭಿವ್ಯಕ್ತಿ ಎನ್ನುವುದು ಮಹಿಳೆಯರ ಚೈತನ್ಯದಲ್ಲಿಯೇ ಇದೆ. ಪತ್ರಕರ್ತೆಯರು ಸಹಜವಾಗಿ ಅಭಿವ್ಯಕ್ತಿಗೊಂಡಷ್ಟು ಸಮಾಜ ಸ್ವಾಸ್ಥವಾಗಿರುತ್ತದೆ ಎಂದರು.
ಪತ್ರಕರ್ತೆಯರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲೇ ನಾನೊಂದು ಮಾತು ಹೇಳಿದ್ದೆ, "ಇಡೀ ವಿಶ್ವಕ್ಕೆ ಕೋವಿಡ್ ಆವರಿಸಿದಾಗ ಈ ಸಂದರ್ಭವನ್ನು ಅತ್ಯಂತ ಯಶಸ್ವಿಯಾಗಿ ಮತ್ತು ಮಾನವೀಯವಾಗಿ ನಿರ್ವಹಿಸಿದ್ದು ಮಹಿಳಾ ಅಧ್ಯಕ್ಷರು ಇರುವ ದೇಶಗಳು ಮಾತ್ರ ಎಂದು ಸ್ಮರಿಸಿದರು.
ಇವತ್ತಿನವರೆಗೂ ಯುದ್ಧವನ್ನು ರೋಚಕವಾಗಿ, ವಿಜ್ರಂಭಿಸಿ ಬರೆದ ಪತ್ರಕರ್ತೆಯನ್ನು ನಾನು ನೋಡಿಲ್ಲ. ಹೀಗಾಗಿ ಪತ್ರಕರ್ತೆಯರ ಅಭಿವ್ಯಕ್ತಿ ಹೆಚ್ಚೆಚ್ಚು ಸಮಾಜಮುಖಿ ಆಗಿರುತ್ತದೆ ಎಂದರು. ಆರಂಭದಲ್ಲಿ ಬೆರಳೆಣಿಕೆಯಷ್ಟು ಪತ್ರಕರ್ತೆಯರು ಇದ್ದರು. ಈಗ ಅವರ ಸಂಖ್ಯೆ ಸಮಾಧಾನಕರ ಮಟ್ಟದಲ್ಲಿ ಹೆಚ್ಚಳಗೊಂಡಿದೆ.
ಕನ್ನಡ ಪತ್ರಿಕೋದ್ಯಮವನ್ನು ಕಟ್ಟಿ ಬೆಳೆಸುವಲ್ಲಿ ಪತ್ರಕರ್ತೆಯರು ಸಮ ಸಮವಾದ ಶ್ರಮವನ್ನು ಹಾಕಿದ್ದಾರೆ. ಪತ್ರಕರ್ತೆಯರು ಈಚಿನ ದಿನಗಳಲ್ಲಿ ಪುರವಣಿ, ಪಾಕ್ಷಿಕ, ಮಾಸಿಕಗಳಿಗೆ ಸೀಮಿತಗೊಳ್ಳುತ್ತಿದ್ದಾರೆ. ಎಲ್ಲ ವಿಭಾಗಗಳಲ್ಲೂ ಅದರಲ್ಲಿಯೂ ರಾಜಕೀಯ ವರದಿಗಾರಿಕೆಯಲ್ಲಿ ಮುದ್ರಣ ಕ್ಷೇತ್ರದ ಪತ್ರಕರ್ತೆಯರ ಸಂಖ್ಯೆ ಹೆಚ್ಚಳಗೊಳ್ಳಬೇಕಿದೆ.
ನಾನು ಮುದ್ರಣ ಮಾಧ್ಯಮದಿಂದ ಬಂದವನಾಗಿ ಈ ಮಾತನ್ನು ಪುನರ್ ಉಚ್ಚರಿಸಲು ಇಷ್ಟಪಡುತ್ತೇನೆ. ರಾಜಕೀಯ ವಿಡಂಬನೆಗಳ ಮೂಲಕ ರಾಜಕಾರಣಿಗಳನ್ನು ತಿದ್ದುವ ಅವಕಾಶಗಳನ್ನು ಪತ್ರಕರ್ತೆಯರು ಕೇಳಿ ಪಡೆದುಕೊಳ್ಳಬೇಕು. ತಮ್ಮ ಸಾಮರ್ಥ್ಯವನ್ನು ಅರಿತು ತಮಗೇನು ಬೇಕು ಎಂಬುದನ್ನು ಕೇಳಿ ಪಡೆದುಕೊಳ್ಳುವುದಕ್ಕೆ ಪತ್ರಕರ್ತೆಯರು ಎಂದಿಗೂ ಹಿಂಜರಿಯಬಾರದು ಎಂದರು.
ಕುಟುಂಬದೊಳಗೆ ಇರುವ ರಾಜಕಾರಣವನ್ನು ಬಹಳ ಚೆನ್ನಾಗಿ ಅರಿತ ಮಹಿಳೆಯರು ಪತ್ರಕರ್ತೆಯರಾದರೆ, ಅದರಲ್ಲೂ ರಾಜಕೀಯ ವಿಶ್ಲೇಷಕಿಯರಾದರೆ ರಾಜಕೀಯ ಸೂಕ್ಷ್ಮಗಳನ್ನು, ಒಳಸುಳಿಗಳನ್ನು ಇತರರಿಗಿಂತ ಸಶಕ್ತವಾಗಿ ಅಂದಾಜು ಮಾಡಬಲ್ಲರು. ಮಹಿಳೆಯರು ಒಂದು ದೇಶದ ಚುಕ್ಕಾಣಿ ಹಿಡಿದು ಯುದ್ಧಗಳಿಗೆ ಕರೆ ಕೊಟ್ಟ ಉದಾಹರಣೆ ಇಲ್ಲ. ಆದರೆ, ಎದುರಾದ ಯುದ್ಧವನ್ನು ದಿಟ್ಟತನದಿಂದ ಸಮರ್ಥವಾಗಿ ನಿರ್ವಹಿಸಿದ ಉದಾಹರಣೆಗಳು ಕಿತ್ತೂರು ರಾಣಿ ಚನ್ನಮ್ಮನಿಂದ ಇಂದಿರಾಗಾಂಧಿ ಅವರ ವರೆಗೂ ಇದೆ ಎಂದರು.
ಮಹಿಳೆಯರಿಗಿರುವ ಈ ಕೌಶಲವನ್ನು ಪತ್ರಿಕಾರಂಗ ಸಶಕ್ತವಾಗಿ ಬಳಸಿಕೊಳ್ಳಬೇಕಿದೆ.ರಾಜಕೀಯ ವರದಿಗಾರಿಕೆ, ವಿಡಂಬನಾ ಶೈಲಿ ಬರಹ, ವ್ಯಂಗಚಿತ್ರ ರಚನೆಗಳಲ್ಲಿ ರಾಜ್ಯದಾದ್ಯಂತ ಇರುವ ಪತ್ರಕರ್ತೆಯರ ಪ್ರತಿಭೆಯನ್ನು ಒರಗೆ ಹಚ್ಚುವಂತಾಗಬೇಕು. ಇದಕ್ಕೆ ಕರ್ನಾಟಕ ಪತ್ರಕರ್ತೆಯರ ಸಂಘವೇ ರಾಜ್ಯಮಟ್ಟದಲ್ಲಿ ಪ್ರತಿಭಾ ಅನ್ವೇಷಣೆ ಮಾಡುವಂತಾಗಲಿ. ಆ ಮೂಲಕ ರಾಜ್ಯಕ್ಕೆ ರಾಜಕೀಯ ವಿಶ್ಲೇಷಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಸಿಗುವಂತಾಗಲಿ ಎಂದು ಕರೆ ನೀಡಿದರು.
ಪತ್ರಕರ್ತೆಯರನ್ನು ಆರ್ಥಿಕ ಹಾಗೂ ಮಾಧ್ಯಮ, ರಾಜಕೀಯ ಸಲಹೆಗಾರರನ್ನಾಗಿ ಹೆಚ್ಚಿನ ಸಂಖ್ಯೆಯಲ್ಲಿ ನೋಡಲು ಇಷ್ಟಪಡುತ್ತೇನೆ. ಇಲ್ಲ ಎಂಬ ಹಳಹಳಿಕೆ ಬಿಡಿ. ಇರುವ ಒಗ್ಗಟ್ಟಿನಲ್ಲಿಯೇ ಅವಕಾಶಗಳನ್ನು ಪಡೆದುಕೊಳ್ಳಿ.
ಮಹಿಳೆಯರಿಗಿರುವ ಒಳನೋಟ ಗಾಢವಾದ್ದದ್ದು. ಈ ಒಳನೋಟಗಳು ಸಾಮಾಜಿಕ, ಅರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳ ಅಭಿವೃದ್ದಿಗೆ ವಿಶಿಷ್ಡ ಸಂರಚನೆ ಒದಗಿಸಬಲ್ಲದು ಎಂದರು.
ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ಬದ ಸರ್ಕಾರ ಮಾಧ್ಯಮ ಅಕಾಡೆಮಿಗೆ ಪತ್ರಕರ್ತೆಯನ್ನೇ ಆಯ್ಕೆ ಮಾಡಿದೆ. ಪತ್ರಕರ್ತೆಯರ ಅಹವಾಲುಗಳಿಗೆ ಸರ್ಕಾರ ಸದಾ ಕಿವಿಯಾಗುತ್ತಿದೆ. ರಾಜ್ಯದಾದ್ಯಂತ ಇರುವ ಎಲ್ಲ ಮಾಧ್ಯಮಗಳಲ್ಲಿ ಕೆಲಸ ಮಾಡುವ ಪತ್ರಕರ್ತೆಯರನ್ನು ಒಗ್ಗೂಡಿಸುವುದು ಸುಲಭದ ಕೆಲಸವಲ್ಲ. ಕರ್ನಾಟಕ ಪತ್ರಕರ್ತೆಯರ ಸಂಘ ಈ ಕೆಲಸ ಮಾಡಿರುವುದು ಶ್ಲಾಘನೀಯ. ಪತ್ರಕರ್ತೆಯರ ಸಂಖ್ಯೆ ಹೆಚ್ಚಲಿ ಹಾರೈಸುತ್ತೇನೆ ಎಂದರು.