ಕಾರವಾರ, ನ. 09 (DaijiworldNews/AA): ಇಲ್ಲಿನ ಕೈಗಾ ಅಣು ವಿದ್ಯುತ್ ಸ್ಥಾವರದ ಅಣು ತ್ಯಾಜ್ಯ ಘಟಕದಲ್ಲಿ ಕಾವಲಿಗೆ ನಿಂತಿದ್ದ ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆಯ ಹೆಡ್ಕಾನ್ಸ್ಟೇಬಲ್ ಮೈಮೇಲೆ ಕಬ್ಬಿಣದ ಗೇಟ್ ಬಿದ್ದು ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರದ ಮಹಿಮಾನಗಡ್ ಮೂಲದ ಶೇಖರ್ ಭೀಮರಾವ್ ಜಗದಾಲೆ (48) ಮೃತ ಯೋಧ. ಅವರು ಕಾವಲು ಕಾಯುತ್ತಿದ್ದ ವೇಳೆ ಭಾರದ ದೊಡ್ಡ ಕಬ್ಬಿಣದ ಗೇಟ್ ತುಂಡಾಗಿ ಮೈಮೇಲೆ ಬಿದ್ದಿತ್ತು. ಪರಿಣಾಮ ಅವರ ತಲೆಗೆ ಗಂಭೀರ ಗಾಯವಾಗಿತ್ತು ಎಂದು ತಿಳಿದುಬಂದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಎಸ್ಟಿಎಫ್ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಕೈಗಾದ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.