ಬೆಂಗಳೂರು, ನ. 08 (DaijiworldNews/AA): ರಾಹುಲ್ ಗಾಂಧಿಗೆ ವೋಟ್ ಚೋರಿ ಬಗ್ಗೆ ಮಾತಾಡುವ ನೈತಿಕತೆಯೇ ಇಲ್ಲ. ಮೊದಲು ಕೋಲಾರದಲ್ಲಿ ಆಗಿರುವ ವೋಟ್ ಚೋರಿ ಬಗ್ಗೆ ಮಾತಾಡಲಿ. ಧೈರ್ಯ ಇದ್ದರೆ ಡಿಕೆಶಿ, ಸಿದ್ದರಾಮಯ್ಯ ಮಾತಾಡಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.

ವೋಟ್ಚೋರಿ ಆರೋಪ ಕುರಿತು ಕಾಂಗ್ರೆಸ್ ಸಹಿ ಸಂಗ್ರಹ ಅಭಿಯಾನವನ್ನ ಟೀಕಿಸಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, "ಇಡೀ ದೇಶದಲ್ಲಿ ವೋಟ್ ಚೋರಿ ಮಾಡಿ ಅಧಿಕಾರ ಅನುಭವಿಸಿದವರು ಕಾಂಗ್ರೆಸ್ನವರು. ಅವರು ಒಂದು ಕೋಟಿ ಸಹಿ ಸಂಗ್ರಹ ಮಾಡಿದರೆ ನಾವು 7 ಕೋಟಿ ಜನರ ಸಹಿ ಸಂಗ್ರಹಿಸುತ್ತೇವೆ" ಎಂದು ವಾಗ್ದಾಳಿ ನಡೆಸಿದ್ದಾರೆ.
"ರಾಹುಲ್ ಗಾಂಧಿ ಮಾಡಿರುವ ವೋಟ್ ಚೋರಿ ಆರೋಪಕ್ಕೆ ಇದುವರೆಗೂ ಒಂದೂ ದಾಖಲೆ ಕೊಟ್ಟಿಲ್ಲ. ರಾಹುಲ್ ಗಾಂಧಿ ಸುಮ್ಮನೆ ಒಂದು ಸ್ಕ್ರೀನ್ ತೋರಿಸಿ ಸುಳ್ಳು ಹೇಳುತ್ತಾರೆ. ಕಾನೂನು ಉಲ್ಲಂಘನೆ ಆಗಿದ್ರೆ ಕೋರ್ಟ್ ಗೆ ದೂರು ಕೊಡಲಿ. ಅಲ್ಲಿ ದೂರು ಕೊಟ್ಟರೆ ಈ ಕಾಂಗ್ರೆಸ್ ಕಳ್ಳರೇ ಸಿಕ್ಕಿ ಹಾಕಿಕೊಳ್ಳುತ್ತಾರೆ. ಮಾಲೂರಿನಲ್ಲಿ ಇವರೇ ವೋಟ್ ಚೋರಿ ಮಾಡಿ ಕೋರ್ಟ್ ನಲ್ಲಿ ಛೀಮಾರಿ ಹಾಕಿಸಿಕೊಂಡಿದ್ದಾರೆ. ಅಲ್ಲಿನ ಡಿಸಿ ವಿರುದ್ಧವೂ ಕ್ರಮ ಆಗಿದೆ. ಕಾಂಗ್ರೆಸ್ ಶಾಸಕರ ಸದಸ್ಯತ್ವ ಅಸಿಂಧುಗೊಂಡಿದೆ. ಇಷ್ಟೆಲ್ಲ ಮಾಡಿದವರು ಯಾರು ಅಂದರೆ ಕಾಂಗ್ರೆಸ್ನವರು. ದೇಶದಲ್ಲಿ ಬುದ್ದಿಗೆಟ್ಟ ನಾಯಕ ರಾಹುಲ್ ಗಾಂಧಿ. ಸೈನಿಕರಿಗೂ ರಿಸರ್ವೇಷನ್ ಬೇಕು ಅಂತಾರೆ. ಬುದ್ಧಿಹೀನರು ಇವರು. ನಾಚಿಕೆಗೇಡು, ಇವರಿಗೆ ಸ್ವಲ್ಪವೂ ಬುದ್ಧಿ ಇಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.