ಕತಿಹಾರ್, ನ. 08 (DaijiworldNews/AA): 'ಕಟ್ಟಾ (ದೇಸಿ ಬಂದೂಕು) ಪದ ಬಳಕೆಯು ಪ್ರಧಾನಿ ಹುದ್ದೆಯ ಘನತೆಗೆ ತಕ್ಕುದಲ್ಲ. ಮೋದಿ ಅವರು ಇಂಥ ಮಾತುಗಳಿಂದ ಪ್ರಧಾನಮಂತ್ರಿ ಸ್ಥಾನದ ಮಾನವನ್ನು ಕಳೆದಿದ್ದಾರೆ' ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಕಿಡಿಕಾರಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯ 2ನೇ ಹಂತದ ಮತದಾನಕ್ಕೂ ಪೂರ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೀತಾಮರ್ಹಿ ಎಂಬಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಶನಿವಾರ ಮಾತನಾಡಿದರು. ಈ ಸಂದರ್ಭದಲ್ಲಿ ಅವರು 'ಕಟ್ಟಾ ಸರ್ಕಾರ್' ಎಂದು ಆರ್ಜೆಡಿ, ಕಾಂಗ್ರೆಸ್ ಒಳಗೊಂಡ ಮಹಾ ಘಟಬಂದನ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಈ ಬಗ್ಗೆ ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕತಿಹಾರ್ನಲ್ಲಿ ಮಾತನಾಡಿರುವ ಪ್ರಿಯಾಂಕಾ, "ಒಂದು ಕಾಲದಲ್ಲಿ ಬ್ರಿಟಿಷರ ವಿರುದ್ಧ ಮಹಾತ್ಮಗಾಂಧಿ ಅವರು ನಡೆಸಿದ ಹೋರಾಟವನ್ನೇ ಕಾಂಗ್ರೆಸ್ ಇಂದು ಅನುಸರಿಸುತ್ತಿದೆ. ಒಂದೆಡೆ ಅಹಿಂಸೆ, ಎಲ್ಲರನ್ನೂ ಒಳಗೊಳ್ಳುವ 'ವಂದೇ ಮಾತರಂ' ಘೋಷಣೆಯನ್ನು ಮೋದಿ ಅವರು ಮೊಳಗಿಸುತ್ತಾರೆ. ಮತ್ತೊಂದೆಡೆ 'ಕಟ್ಟಾ' ಪದವನ್ನು ಬಳಸುತ್ತಾರೆ" ಎಂದು ಆಕ್ರೋಶ ಹೊರಹಾಕಿದ್ದಾರೆ.
"ಬಿಹಾರದಲ್ಲಿರುವ ಎನ್ಡಿಎ ಸರ್ಕಾರವು ಯುವಕರಿಗೆ ಉದ್ಯೋಗ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಸರ್ಕಾರಿ ಸ್ವಾಮ್ಯ ಸಂಸ್ಥೆಗಳನ್ನು ತನ್ನ ಮಿತ್ರರಾದ ಎರಡು ಕಾರ್ಪೊರೇಟ್ ಕಂಪನಿಗಳಿಗೆ ನೀಡಿದೆ. 10,000 ರೂ. ಲಂಚ ನೀಡಿ ಮಹಿಳೆಯರ ಮತಗಳನ್ನು ಪಡೆಯಬಹುದು ಎಂದು ಬಿಜೆಪಿ ಆಲೋಚಿಸಿದೆ" ಎಂದು ಹೇಳಿದರು.