ಔರಂಗಾಬಾದ್, ನ. 04 (DaijiworldNews/AA): ಸಾಮಾಜಿಕ ಮಾಧ್ಯಮ 'ಚಟ'ವನ್ನು ಪ್ರಧಾನಿ ಪ್ರೋತ್ಸಾಹಿಸುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ಜನರ ಸಮಸ್ಯೆಗಳಿಂದ ವಿಚಲಿತರಾಗಲು ಯುವಜನರು ಸಾಮಾಜಿಕ ಮಾಧ್ಯಮಗಳಲ್ಲಿ ನಿರತರಾಗಲು ಬಯಸುತ್ತಾರೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.

ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, "ದೇಶದ ಯುವಜನತೆ ಸಾಮಾಜಿಕ ಮಾಧ್ಯಮಗಳಲ್ಲಿ ತಲ್ಲೀನರಾಗಲು ಪ್ರಧಾನಿ ನರೇಂದ್ರ ಮೋದಿ ಬಯಸುತ್ತಾರೆ. ಇದರಿಂದ ಯುವಜನತೆ ಹೆಚ್ಚಿನ ಪ್ರಶ್ನೆಗಳನ್ನು ಎತ್ತುವುದಿಲ್ಲ. ಮೋದಿ ನಿಮ್ಮನ್ನು ರೀಲ್ಸ್, ಇನ್ಸ್ಟಾಗ್ರಾಂ, ಫೇಸ್ಬುಕ್ ವ್ಯಸನಿಯನ್ನಾಗಿ ಮಾಡಲು ಬಯಸುತ್ತಾರೆ. ಇದು 21ನೇ ಶತಮಾನದ ಚಟವಾಗಿದೆ. ಯುವಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಯಸುತ್ತಾರೆ. ಅಲ್ಲದೆ ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ಕ್ಷೇತ್ರಗಳ ಸಮಸ್ಯೆಗಳಿಗೆ ತಮ್ಮ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡದಿರಲು ಬಯಸುತ್ತಾರೆ" ಎಂದು ವಾಗ್ದಾಳಿ ನಡೆಸಿದ್ದಾರೆ.
ಮುಂದುವರೆದು, "ಬಿಹಾರದಲ್ಲಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ ಕಳ್ಳತನದಲ್ಲಿ ಭಾಗಿಯಾಗಿದ್ದಾರೆ. ಇಲ್ಲದಿದ್ದರೆ ಬಿಹಾರದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದು ಅವರಿಗೆ ತಿಳಿದಿದೆ. ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ 'ಇಂಡಿಯಾ' ಮೈತ್ರಿಯು ಹಿಂದುಳಿದ, ದಲಿತರ ಸರ್ಕಾರವಾಗಿ ಕೆಲಸ ಮಾಡಲಿದೆ. ಬಿಹಾರವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಬಯಸುತ್ತೇವೆ. 'ಮೇಡ್ ಇನ್ ಬಿಹಾರ'ದ ಮೊಬೈಲ್ ಫೋನ್, ಬಟ್ಟೆಬರೆ ನೋಡಿ ಚೀನಾ ಕೂಡಾ ಗಮನಿಸುವಂತೆ ಮಾಡುತ್ತೇವೆ" ಎಂದು ಭರವಸೆ ನೀಡಿದರು.