ತಿರುವನಂತಪುರಂ, ನ. 01 (DaijiworldNews/AA): ಕೇರಳ ತೀವ್ರ ಬಡತನವನ್ನು ನಿರ್ಮೂಲನೆ ಮಾಡಿದ ಭಾರತದ ಮೊದಲ ರಾಜ್ಯವಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್ ಘೋಷಣೆ ಮಾಡಿದರು.

ಕೇರಳ 'ಪಿರವಿ' ಅಥವಾ ರಾಜ್ಯ ರಚನೆಯ ದಿನದಂದು ಕರೆಯಲಾದ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಅವರು, "ನಾವು ಕೇರಳವನ್ನು ತೀವ್ರ ಬಡತನವಿಲ್ಲದ ಮೊದಲ ಭಾರತೀಯ ರಾಜ್ಯವನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಈ ವಿಧಾನಸಭೆಯು ಅನೇಕ ಐತಿಹಾಸಿಕ ಕಾನೂನುಗಳು ಮತ್ತು ನೀತಿ ಘೋಷಣೆಗಳಿಗೆ ಸಾಕ್ಷಿಯಾಗಿದೆ. ನವ ಕೇರಳದ ಸೃಷ್ಟಿಯಲ್ಲಿ ಮತ್ತೊಂದು ಮೈಲಿಗಲ್ಲನ್ನು ಗುರುತಿಸುವ ಕ್ಷಣದಲ್ಲಿ ವಿಧಾನಸಭೆ ಈಗ ಸಭೆ ಸೇರುತ್ತದೆ" ಎಂದರು.
"ಸರ್ಕಾರ ರಚನೆಯಾದ ಮೊದಲ ಸಚಿವ ಸಂಪುಟ ಸಭೆಯಲ್ಲಿ ತೀವ್ರ ಬಡತನ ನಿರ್ಮೂಲನೆಯು ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿತ್ತು ಎಂದು ಮುಖ್ಯಮಂತ್ರಿ ಹೇಳಿದರು. ವಿಧಾನಸಭೆ ಚುನಾವಣೆಯ ಸಮಯದಲ್ಲಿ ಜನರಿಗೆ ನೀಡಿದ ಪ್ರಮುಖ ಭರವಸೆಗಳಲ್ಲಿ ಒಂದನ್ನು ಈಡೇರಿಸುವ ಆರಂಭವೂ ಇದಾಗಿದೆ" ಎಂದು ತಿಳಿಸಿದರು.
"ಬಡತನ ನಿರ್ಮೂಲನೆ ಮಾಡಲು ಸರ್ಕಾರ 1,000 ಕೋಟಿ ರೂ.ಗಳಿಗೂ ಹೆಚ್ಚಿನ ಹೂಡಿಕೆಯೊಂದಿಗೆ, ರಾಜ್ಯ ಸರ್ಕಾರವು 20,648 ಕುಟುಂಬಗಳಿಗೆ ದೈನಂದಿನ ಆಹಾರವನ್ನು ಖಾತ್ರಿಪಡಿಸಿತು. ಅವರಲ್ಲಿ 2,210 ಕುಟುಂಬಗಳಿಗೆ ಬಿಸಿ ಊಟ, 85,721 ವ್ಯಕ್ತಿಗಳಿಗೆ ಅಗತ್ಯ ಚಿಕಿತ್ಸೆ ಮತ್ತು ಔಷಧಿ ಮತ್ತು ಸಾವಿರಾರು ಜನರಿಗೆ ವಸತಿ ಒದಗಿಸಲಾಯಿತು" ಎಂದು ಹೇಳಿದರು.
"5,400ಕ್ಕೂ ಹೆಚ್ಚು ಹೊಸ ಮನೆಗಳನ್ನು ನಿರ್ಮಿಸಲಾಗಿದೆ ಮತ್ತು ನಿರ್ಮಾಣ ಹಂತದಲ್ಲಿದೆ. 5,522 ಮನೆಗಳನ್ನು ದುರಸ್ತಿ ಮಾಡಲಾಗಿದೆ ಮತ್ತು 2,713 ಭೂರಹಿತ ಕುಟುಂಬಗಳು ತಮ್ಮ ನಿವಾಸಗಳನ್ನು ನಿರ್ಮಿಸಲು ಭೂಮಿಯನ್ನು ಪಡೆದಿವೆ ಎಂದು ಪಿಣರಾಯಿ ವಿಜಯನ್ ಹೇಳಿದರು. ಇದಲ್ಲದೆ, 21,263 ಜನರು ಮೊದಲ ಬಾರಿಗೆ ಪಡಿತರ ಚೀಟಿಗಳು, ಆಧಾರ್ ಮತ್ತು ಪಿಂಚಣಿಗಳಂತಹ ಅಗತ್ಯ ದಾಖಲೆಗಳನ್ನು ಪಡೆದಿದ್ದಾರೆ ಮತ್ತು 4,394 ಕುಟುಂಬಗಳಿಗೆ ಜೀವನೋಪಾಯ ಯೋಜನೆಗಳಿಂದ ಬೆಂಬಲ ನೀಡಲಾಗಿದೆ" ಎಂದು ವಿವರಿಸಿದರು.