ಬೆಂಗಳೂರು,ಅ. 24 (DaijiworldNews/AK): ಪ್ರಿಯಾಂಕ್ ಅವರ ಬುಡಕ್ಕೆ ಬೆಂಕಿ ಬಿದ್ದಾಗ ಮಾತ್ರ ದಲಿತರು ನೆನಪಾಗುತ್ತಾರೆ. ಅವರು ಎತ್ತಿರುವ ವಿಚಾರಕ್ಕೆ ಮಾತ್ರ ಇಂದು ದಲಿತ ಸಂಘಟನೆಗಳು ಬೆಂಬಲ ನೀಡಿರುವುದು ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮಾಡಿರುವ ಅಪಮಾನ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ಷೇಪಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನ.2 ರಂದು ಹಲವು ಸಂಘಟನೆಗಳು ಪಧಸಂಚಲನ ಮಾಡುತ್ತೇವೆ ಎಂದು ನ್ಯಾಯಾಲಯದಲ್ಲಿ ಅನುಮತಿಗೆ ಅರ್ಜಿಯನ್ನು ಹಾಕಿವೆ. ಆ ಕಾರಣದಿಂದಾಗಿ ಶಾಂತಿ ಸಭೆ ಮಾಡಲು ನ್ಯಾಯಾಲಯವು ಆದೇಶ ನೀಡಿರುವುದು ಸ್ವಾಗತಾರ್ಹ. ಬಿಜೆಪಿ ಯಾವ ರೀತಿ ಐ ಲವ್ ಆರ್.ಎಸ್.ಎಸ್ ಎನ್ನುತ್ತೇವೆಯೋ ಹಾಗೆಯೇ ಡಿ.ಎಸ್.ಎಸ್. ಸಂಘಟನೆಯನ್ನು ಕಾಣುತ್ತದೆ ಎಂದು ತಿಳಿಸಿದರು.
ದಲಿತ ಸಂಘಟನೆಗಳ ಮುಖಂಡರು ಹಲವು ವರ್ಷಗಳಿಂದ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯದಲ್ಲಿ ಹೋರಾಟ ಮಾಡುತ್ತಿದ್ದು, ಅದನ್ನು ನಾವು ಗೌರವಿಸುತ್ತೇವೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ದಲಿತ ಸಂಘಟನೆಗಳನ್ನು ಬದಿಗಿಟ್ಟು ತಮಗೆ ಬೇಕಾದ ದಲಿತ ಮುಖಂಡರನ್ನು ಎತ್ತಿಕಟ್ಟಿ ಈ ರೀತಿ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ದಲಿತ ಯಾವ ಸಂಘಟನೆಗಳು ಮೊದಲಿನಿಂದ ಪಥ ಸಂಚಲನ ಮಾಡಿರುವವರಲ್ಲ. ಆದರೆ ಪ್ರಸ್ತುತ ನಾವು ಮಾಡುತ್ತೇವೆ ಎಂದಿದ್ದು ಏಕೆ ಎಂದು ಪ್ರಶ್ನಿಸಿದರು.
ಇವರು ಯಾವುದಾದರು ಧರ್ಮದ ಪರವೇ ಅಥವಾ ದಲಿತ ಸಮುದಾಯಗಳ ಪರವೇ ಅಥವಾ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಕುಟುಂಬದ ಪರವೇ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಪಥ ಸಂಚಲನಕ್ಕೆ ಪೈಪೋಟಿ ಏಕೆ...
ದಲಿತ ಸಂಘಟನೆಗಳು ಪಥ ಸಂಚಲನ ಮಾಡುವುದಕ್ಕೆ ನಮ್ಮ ಬೆಂಬಲವಿದೆ. ಏಕೆಂದರೆ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ನೀಡುವ ಗೌರವವನ್ನು ನಾವು ಎಲ್ಲ ದಲಿತ ಸಂಘಟನೆಗಳಿಗೆ ಕೊಡಬೇಕು; ನಾವು ಕೊಡುತ್ತೇವೆ. ಅದನ್ನು ವಿರೋಧಿಸುವುದಿಲ್ಲ ಎಂದು ತಿಳಿಸಿದರು.
ದಲಿತ ಸಂಘಟನೆಗಳು ಯಾವಾಗಲಾದರೂ ಪಥ ಸಂಚಲನ ಮಾಡಲಿ, ಶಿಸ್ತು, ಸಂಯಮ ಸಂಘಟನೆಗಳಲ್ಲಿ ಬರಬೇಕು, ಅದನ್ನು ಅವರು ಮೈಗೂಡಿಸಿಕೊಂಡಿರುವುದು ನಮಗೆ ಸಂತೋಷವಿದೆ. ಆದರೆ ಪಥ ಸಂಚಲನಕ್ಕೆ ಪೈಪೋಟಿ ಏಕೆ ಮಾಡುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಕೇಳಿದರು.