ನವದೆಹಲಿ, ಅ. 16 (DaijiworldNews/TA): ಕ್ಯಾನ್ಸರ್ ಹೆಸರು ಕೇಳುವಾಗಲೇ ಮನಸ್ಸಲ್ಲಿ ಅದೇನೋ ಭಾವನೆ. ಪ್ರತಿ ವರ್ಷವೂ ದೇಶದಲ್ಲಿ ಲಕ್ಷಾಂತರ ಜನ ಈ ಮಾರಕ ಕಾಯಿಲೆಗೆ ಸಾವನ್ನಪ್ಪುತ್ತಿದ್ದಾರೆ. ಕೆಲವರು ಇದರ ವಿರುದ್ಧ ಹೋರಾಡಿ ಗೆದ್ದು ಬಂದರೆ ಮತ್ತೂ ಕೆಲವರು ಕೇವಲ ನೆನಪಾಗಿ ಉಳಿಯುತ್ತಾರೆ.


ಮಕ್ಕಳು ಯುವಕರು ಮಧ್ಯವಯಸ್ಕರು ವೃದ್ಧರು ಎಂಬ ಭೇದ ತೋರದೆ ಕ್ಯಾನ್ಸರ್ ಬಹುತೇಕ ಇಡೀ ಸಮುದಾಯ ಅನೇಕರನ್ನು ಕಾಡುವ ರಾಕ್ಷಸ. ಒಂದು ಕಡೆ ಈ ಮಾರಕ ಕಾಯಿಲೆಯ ನೋವು ಮತ್ತೊಂದೆಡೆ ಈ ಕಾಯಿಲೆ ಬಂತಲ್ಲ ಎಂಬ ಮಾನಸಿಕ ದುಃಖ. ಒಬ್ಬ ವ್ಯಕ್ತಿಯನ್ನು ಮತ್ತಷ್ಟು ಕುಗ್ಗಿಸಿ ಬಿಡುತ್ತದೆ. ಕಣ್ಣಮುಂದೆ ಸಾವನ್ನು ಪ್ರತಿನಿತ್ಯ ನೋಡುತ್ತಾ ನಾನು ಅವರಲ್ಲೊಬ್ಬರಾಗುವುದು ಖಚಿತ ಎಂಬ ಮನೋಭಾವದೊಂದಿಗೆ ಆಸ್ಪತ್ರೆಯ ನಾಲ್ಕು ಗೋಡೆಗಳ ಮಧ್ಯೆ ಮನದಲ್ಲಿನ ದುಗುಡದೊಂದಿಗೆ ಬದುಕೋ ಅದೆಷ್ಟೋ ಜೀವಗಳ ಯಾತನೆಗೆ ಡಾಕ್ಟರ್ ಹೇಳೋ ಆ ಐ ಎಮ್ ಸಾರಿ ಪದ ಇಡೀ ಕುಟುಂಬವನ್ನೇ ಕಣ್ಣೀರಲ್ಲಿ ಕೈತೊಳೆಯೋ ಹಾಗೆ ಮಾಡುತ್ತದೆ. ಅಂತಹ ಸಾವು ಸಮೀಪದಲ್ಲಿರುವ 21 ವರ್ಷದ ತರುಣನ ಸಾಮಾಜಿಕ ಜಾಲತಾಣದ ಪೋಸ್ಟ್ ಒಂದು ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ.
ತಾನಿನ್ನು ಹೆಚ್ಚು ಕಾಲ ಬದುಕುಳಿಯುವುದಿಲ್ಲ ಎಂದು ತಿಳಿದು ಕ್ಯಾನ್ಸರ್ ಪೀಡಿತ ಯುವಕನೋರ್ವ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ವೊಂದನ್ನು ಬರೆದುಕೊಂಡಿದ್ದು, ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. RANT VENT ಎಂಬ ಹೆಸರಿನ ರೆಡಿಟ್ ಖಾತೆಯಿಂದ ಈ ಪೋಸ್ಟ್ ವೈರಲ್ ಆಗಿದೆ. ಪ್ರತಿಯೊಬ್ಬರಿಗೂ ಹಾಯ್, ನಾನು 21 ವರ್ಷದ ತರುಣ, ನಾನು 2023ರಿಂದ 4ನೇ ಹಂತದ ಕರುಳಿನ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದೇನೆ. ನಾನು ಎಣಿಸಲಾಗದಷ್ಟು ಬಾರಿ ಕಿಮೊಥೆರಪಿ ಮತ್ತು ಆಸ್ಪತ್ರೆಯ ವಾಸ್ತವ್ಯದ ನಂತರ, ಪ್ರಯತ್ನಿಸಲು ಏನೂ ಉಳಿದಿಲ್ಲ ಎಂದು ವೈದ್ಯರು ನನಗೆ ಹೇಳಿದ್ದಾರೆ. ಬಹುಶಃ ಈ ವರ್ಷದ ಅಂತ್ಯದಲ್ಲಿ ನಾನು ಇರುತ್ತೇನೋ ಇಲ್ಲವೋ ಎಂಬುವುದು ಹೇಳಲಾಗದು.
ದೀಪಾವಳಿ ಹತ್ತಿರದಲ್ಲೇ ಇದೆ. ಹಾಗೂ ಬೀದಿಯಲ್ಲಿ ದೀಪಗಳು ಬೆಳಗೋದಕ್ಕೆ ಶುರುವಾಗಿದೆ. ನಾನು ಆ ದೀಪಗಳನ್ನು ಕೊನೆಯ ಬಾರಿ ನೋಡುತ್ತಿದ್ದೇನೆ ಎಂಬುವುದನ್ನು ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. ನಾನು ಅ ಬೆಳಕನ್ನು ಮಿಸ್ ಮಾಡಿಕೊಳ್ಳುತ್ತೇನೆ, ಆ ನಗು ಹಾಗೂ ಆ ಸದ್ದನ್ನು ಮಿಸ್ ಮಾಡುಕೊಳ್ಳುತ್ತೇನೆ. ನನ್ನ ಜೀವನಯಾತ್ರೆ ಸದ್ದಿಲ್ಲದೇ ಮುಗಿಯುತ್ತಿರುವಾಗ ಜೀವನ ಮುಂದುವರಿಯುತ್ತಿರುವುದನ್ನು ನೋಡುವುದಕ್ಕೆ ವಿಚಿತ್ರ ಎನಿಸುತ್ತಿದೆ. ನನಗೆ ಗೊತ್ತು ಮುಂದಿನ ವರ್ಷ ನಾನು ಕೇವಲ ನೆನಪಾಗಿರುವಾಗ ನನ್ನ ಜಾಗದಲ್ಲಿ ಮತ್ತಿನ್ಯಾರೋ ದೀಪವನ್ನು ಉರಿಸುತ್ತಾರೆ.
ಇದು ವಿಚಿತ್ರವೆನಿಸುತ್ತದೆ. ಬಹುತೇಕ ಅಭ್ಯಾಸದಂತೆ ಕೆಲವು ರಾತ್ರಿಗಳಲ್ಲಿ ನಾನು ಈಗಲೂ ಕೂಡ ನನ್ನ ಭವಿಷ್ಯದ ಬಗ್ಗೆ ಕನಸು ಕಾಣುತ್ತೇನೆ ಯೋಜನೆಗಳನ್ನೂ ರೂಪಿಸುತ್ತೇನೆ. ನನಗೂ ಕನಸುಗಳಿದ್ದವು ನಿಮಗೆ ಗೊತ್ತೆ? ನಾನು ತುಂಬಾ ಕಡೆ ಹೋಗಬೇಕು. ಜೀವನದಲ್ಲಿ ಏನಾದರೂ ಮಾಡಬೇಕು. ಬಹುಶಃ ಹುಷಾರಾದರೆ ಒಂದು ನಾಯಿಯನ್ನು ದತ್ತು ಪಡೆಯಬೇಕು ಎಂದೆಲ್ಲಾ ಕನಸು ಕಂಡಿದ್ದೆ. ಆದರೆ ನನಗಿನ್ನು ಹೆಚ್ಚು ಸಮಯವಿಲ್ಲ ಎಂಬುದು ಅರಿವಾಗಿ ಯೋಚನೆಗಳು ಮಾಯವಾಗಿದೆ. ನಾನು ಮನೆಯಲ್ಲಿದ್ದೇನೆ. ನನ್ನ ಪೋಷಕರ ಮುಖದಲ್ಲಿ ದುಃಖವನ್ನು ನಾನು ನೋಡುತ್ತಿದ್ದೇನೆ. ನಾನು ಯಾಕೆ ಇದನ್ನು ಪೋಸ್ಟ್ ಮಾಡುತ್ತಿದ್ದೇನೆ ಎಂದು ನನಗೆ ಗೊತ್ತಿಲ್ಲ, ಬಹುಶಃ ನಾನು ಸಂಪೂರ್ಣವಾಗಿ ಶೂನ್ಯಕ್ಕೆ ಜಾರುವ ಮುನ್ನ ಏನಾದರು ಒಂದು ಗುರುತನ್ನು ಬಿಡಲು ಇದನ್ನೆಲ್ಲಾ ಜೋರಾಗಿ ಹೇಳಲು... ಸರಿ ಮತ್ತೆ ನೋಡೋಣ... ಎಂದು ಅವರು ಬರೆದಿದ್ದು, ಅವರ ಪೋಸ್ಟ್ ಇದೀಗ ವೈರಲ್ ಆಗಿದೆ.
ಸಾವಿನಂಚಿನಲ್ಲಿರುವ ಯುವಕನೋರ್ವ ಬದುಕಿನ ವಾಸ್ತವವನ್ನು ಅರಿತುಕೊಂಡು ಸಾವಿಗಾಗಿ ಕಾಯುತ್ತಿರುವ ಸಮಯದ ಭಾವುಕ ಬರಹ ಈಗ ಅನೇಕರ ಕಣ್ಣಂಚನ್ನು ತೇವಗೊಳ್ಳುವಂತೆ ಮಾಡಿದೆ. ಅನೇಕರು ಕಾಮೆಂಟ್ ಮಾಡಿ ಆ ಯುವಕನಿಗೆ ದೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ. ಅನೇಕರು ದೇವರೇ ಪವಾಡ ಎಂಬುದು ಇದ್ದರೆ ಅದನ್ನು ಈ ಹುಡುಗನ ವಿಚಾರದಲ್ಲಿ ಮಾಡು ಎಂಬುವುದಾಗಿ ಒಬ್ಬರು ಕಾಮೆಂಟ್ ಮಾಡಿದ್ದಾರೆ. ದೇವರೇ ನೀನಿದ್ದರೆ ಈ ಹುಡುಗನ ಬದುಕಿಸು ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಇನ್ನೂ ಅನೇಕರು ಇರುವ ಸ್ವಲ್ಪ ಸಮಯದಲ್ಲಿ ಖುಷಿಯಾಗಿರುವಂತೆ ಕೇಳಿಕೊಂಡಿದ್ಧಾರೆ.
ಒಟ್ಟಾರೆ ಜನನ ಆಕಸ್ಮಿಕ ಮರಣ ನಿಶ್ಚಿತ. ಹುಟ್ಟಿದ ಪ್ರತಿಯೊಂದು ಜೀವಿಯೂ ಸಾಯಲೇ ಬೇಕು. ಇದು ಪ್ರಕೃತಿ ನಿಯಮ. ಆದ್ರೆ ಕೆಲವೊಂದು ಆಕಸ್ಮಿಕ ಸಾವುಗಳು ಒಂದು ಕುಟುಂಬವನ್ನೇ ಕಣ್ಣೀರ ಕೂಪಕ್ಕೆ ತಳ್ಳಿ ಬಿಡುತ್ತದೆ.