ಉತ್ತರ ಪ್ರದೇಶ, ಅ. 10 (DaijiworldNews/AK):ಅಪರಾಧಿಗಳು ಅಕ್ಷರಶಃ ನಡುಗುವಂತೆ ಮಾಡುವ ಕೆಲವು ಪೊಲೀಸ್ ಅಧಿಕಾರಿಗಳಿದ್ದಾರೆ. ಅಂತಹವರಲ್ಲಿ ಉತ್ತರ ಪ್ರದೇಶದ ಸೂಪರ್ ಕಾಪ್ ನವನೀತ್ ಸಿಕೇರಾ ಕೂಡಾ ಒಬ್ಬರು. 1996ರ ಬ್ಯಾಚ್ ನ ಐಪಿಎಸ್ ಅಧಿಕಾರಿಯ ಕಥೆ ತುಂಬಾ ಕುತೂಹಲಕಾರಿಯಾಗಿದೆ.

ನವನೀತ್ ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯಲ್ಲಿ 1971ರ ಅಕ್ಟೋಬರ್ 22ರಂದು ಸರಳ ಕೃಷಿಕ ಕುಟುಂಬದಲ್ಲಿ ಜನಿಸಿದರು. ಆದರೆ ಇಂದು ಈ ಪೊಲೀಸ್ ಅಧಿಕಾರಿ ಹೆಸರಿನಲ್ಲಿ 60 ಎನ್ ಕೌಂಟರ್ ಗಳಿವೆ. ಒಬ್ಬ ಪೊಲೀಸ್ ಇವರ ತಂದೆಯನ್ನು ಅವಮಾನಿಸಿದ್ದರಂತೆ. ಅಂದಿನಿಂದ ಪೊಲೀಸ್ ಇಲಾಖೆಯಲ್ಲಿಯೇ ಕೆಲಸ ಮಾಡಬೇಕು ಎಂದು ನವನೀತ್ ನಿರ್ಧರಿಸಿದ್ದರು, ಮುಂದೆ ಜೀವನದಲ್ಲಿ ಆ ಗುರಿ ಮುಟ್ಟುವಲ್ಲಿ ಯಶಸ್ವಿಯಾದರು.
ನವನೀತ್ ನ ಹಳ್ಳಿಯಲ್ಲಿರುವ ಅವರ ತಂದೆಯ ಜಮೀನನ್ನು ಕೆಲವು ಪ್ರಬಲ ವ್ಯಕ್ತಿಗಳು ಕಿತ್ತುಕೊಂಡಿದ್ದರು. ಈ ಬಗ್ಗೆ ದೂರು ನೀಡಲು ತಂದೆಯೊಂದಿಗೆ ಠಾಣೆಗೆ ಆಗಮಿಸಿದಾಗ ಪೊಲೀಸರು ನವನೀತ್ ಹಾಗೂ ಆತನ ತಂದೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಇಲ್ಲಿಂದಲೇ ಅಪರಾಧದ ವಿರುದ್ಧ ಹೋರಾಡಲು ಮತ್ತು ಪೊಲೀಸ್ ವ್ಯವಸ್ಥೆಯನ್ನು ಸುಗಮಗೊಳಿಸಲು ನವನೀತ್ ಪಣ ತೊಟ್ಟಿದ್ದರು.
ನವನೀತ್ ತನ್ನ ಆರಂಭಿಕ ಶಿಕ್ಷಣವನ್ನು ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿರುವ ಹಿಂದಿ ಮಾಧ್ಯಮ ಶಾಲೆಯಲ್ಲಿ ಮಾಡಿದರು. ನಂತರ ದೆಹಲಿಯ ಹಂಸರಾಜ್ ಕಾಲೇಜಿನಲ್ಲಿ ಪ್ರವೇಶ ಪಡೆದರು. ನಂತರ ನವನೀತ್ ದೆಹಲಿಯ ಐಐಟಿಯಲ್ಲಿ ಬಿ.ಟೆಕ್ ಗೆ ಸೇರಿಕೊಂಡರು.ಆದರೆ ನವನೀತ್ ಎಂಟೆಕ್ ಮಾಡದೆ ನಾಗರಿಕ ಸೇವೆಗೆ ತಯಾರಿ ಆರಂಭಿಸಿದರು. ಯುಪಿಎಸ್ಸಿ ಪರೀಕ್ಷೆಯಲ್ಲಿ ಟಾಪರ್ ಆದರೂ ಐಎಎಸ್ ತೊರೆದು ಐಪಿಎಸ್ ಹುದ್ದೆಯನ್ನು ಆಯ್ಕೆ ಮಾಡಿಕೊಂಡರು.
ನವನೀತ್ ಅವರ ಮೊದಲ ಪೋಸ್ಟಿಂಗ್ ಗೋರಖ್ ಪುರದಲ್ಲಿ ASP ಆಗಿ ಆಗಿತ್ತು. ಉತ್ತರ ಪ್ರದೇಶದಲ್ಲಿ ಮಹಿಳಾ ಸಹಾಯವಾಣಿ ಸಂಖ್ಯೆಯನ್ನು ರಚಿಸುವಲ್ಲಿ ಐಪಿಎಸ್ ನವನೀತ್ ಪ್ರಮುಖ ಪಾತ್ರ ವಹಿಸಿದ್ದಾರೆ.ನವನೀತ್ ಸಿಕೇರಾ ಅವರು ಲಕ್ನೋದ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಐಜಿಯಾಗಿ ಕೆಲಸ ಮಾಡಿದ್ದಾರೆ. ಇವರ ಜೀವನವನ್ನು ಆಧರಿಸಿ ಭೌಕಲ್ ಎಂಬ ವೆಬ್ ಸೀರೀಸ್ ಕೂಡ ಮಾಡಲಾಗಿದೆ.