ಡೆಹ್ರಾಡೂನ್,ಸೆ. 16 (DaijiworldNews/AK): ಸೋಮವಾರ ರಾತ್ರಿ ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ಭಾರೀ ಮಳೆಯಿಂದಾಗಿ ಮೇಘಸ್ಫೋಟ ಸಂಭವಿಸಿದ್ದು, ತಪೋವನ್ನಲ್ಲಿ ಹಲವಾರು ಮನೆಗಳು ಮತ್ತು ಐಟಿ ಪಾರ್ಕ್ ಪ್ರದೇಶದಲ್ಲಿ ತೀವ್ರ ಜಲಾವೃತವಾಗಿದೆ. ಇಬ್ಬರು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

ಮೇಘಸ್ಫೋಟ ಮತ್ತು ನಂತರ ಕಾರ್ಲಿಗಾಡ್ ನದಿಯಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ಹಾನಿ ಉಂಟಾಗಿದೆ. ಆ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ತೀವ್ರ ಮತ್ತು ನಿರಂತರ ಮಳೆಯಿಂದಾಗಿ ಹೊಳೆ ಅಪಾಯಕಾರಿಯಾಗಿ ಉಬ್ಬಿದ್ದು, ಸೋಮವಾರ ರಾತ್ರಿ ಪ್ರಮುಖ ಸೇತುವೆ ಕುಸಿದು ಅದರ ದಡದಲ್ಲಿರುವ ಆಸ್ತಿಪಾಸ್ತಿಗಳಿಗೆ ವ್ಯಾಪಕ ಹಾನಿಯಾಗಿದೆ.
ಡೆಹ್ರಾಡೂನ್ನ ಸಹಸ್ರಧಾರದಲ್ಲಿ ಭಾರೀ ಮಳೆಯಿಂದಾಗಿ ಕೆಲವು ಅಂಗಡಿಗಳು ಹಾನಿಗೊಳಗಾಗಿವೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಧಾಮಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಕೇಂದ್ರದಿಂದ ಸಂಪೂರ್ಣ ಸಹಕಾರದ ಭರವಸೆ ನೀಡಿದ ಪ್ರಧಾನಿ, ಈ ವಿಪತ್ತಿನ ಸಮಯದಲ್ಲಿ ಕೇಂದ್ರ ಸರ್ಕಾರ ಉತ್ತರಾಖಂಡದೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ತಿಳಿಸಿದ್ದಾರೆ.