ಬೆಂಗಳೂರು,ಸೆ. 15 (DaijiworldNews/AK): 15 ವರ್ಷಕ್ಕಿಂತ ಹಳೇ ಎಲ್ಲಾ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದ ಅಧೀನದಲ್ಲಿರುವ ಇಲಾಖೆ, ನಿಗಮ, ನಗರಸಭೆ, ಮಂಡಳಿಗಳ ವಾಹನಗಳನ್ನು ನಾಶಪಡಿಸಲು ಆದೇಶದಲ್ಲಿ ತಿಳಿಸಲಾಗಿದೆ. ಕೇಂದ್ರದ ಆದೇಶದಂತೆ ರಾಜ್ಯ ಸರ್ಕಾರ ಈ ಸೂಚನೆ ನೀಡಿದೆ.
ಆದ್ಯತೆ ಮತ್ತು ಉಪಯೋಗದ ಆಧಾರದ ಮೇಲೆ 5 ಸಾವಿರ ವಾಹನಗಳನ್ನು ನಾಶಪಡಿಸಲು ನಿರ್ದೇಶನ ನೀಡಲಾಗಿದೆ. ರಾಜ್ಯದಲ್ಲಿರುವ ಸ್ಕ್ರಾಪಿಂಗ್ ಘಟಕಗಳಲ್ಲಿ ಸ್ಕ್ರಾಪ್ ಮಾಡಲು ಸರ್ಕಾರದ ಕಾರ್ಯದರ್ಶಿಗಳು ಆದೇಶಿಸಿದ್ದಾರೆ.
ಪರಿಸರ ಸಂರಕ್ಷಣೆ ದೃಷ್ಟಿಯಿಂದ ನೋಂದಣಿಯಾಗಿ 15 ವರ್ಷ ಮೇಲ್ಪಟ್ಟ ವಾಹನಗಳನ್ನು ನಾಶ ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು. ಅದರಂತೆ ರಾಜ್ಯ ಸರ್ಕಾರ ತನ್ನ ಅಧೀನ ಇಲಾಖೆ ಮತ್ತು ಸಂಸ್ಥೆಗಳಲ್ಲಿ ಹಳೆ ವಾಹನಗಳ ನಾಶಕ್ಕೆ ಮುಂದಾಗಿದೆ.