ಕೋಲ್ಕತ್ತಾ, ಸೆ. 14 (DaijiworldNews/TA): ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಂತಿಮ ವರ್ಷದ ವಿದ್ಯಾರ್ಥಿನಿ ಮಾಲ್ಡಾದ ಆಸ್ಪತ್ರೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾಳೆ. ಮೃತಳ ಕುಟುಂಬವು ಮಾಲ್ಡಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಜೂನಿಯರ್ ವೈದ್ಯನಾಗಿದ್ದ ಆಕೆಯ ಗೆಳೆಯನೇ ಈ ಸಾವಿಗೆ ಕಾರಣ ಎಂದು ಆರೋಪಿಸಿದೆ.

ಯುವತಿಯ ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ಸಾವಿನ ಹಿಂದಿನ ನಿಜವಾದ ವಿಚಾರ ತಿಳಿದುಬರುತ್ತವೆ ಎಂದು ಅಧಿಕಾರಿ ಹೇಳಿದ್ದಾರೆ. ದಕ್ಷಿಣ ದಿನಾಜ್ಪುರದ ಬಲೂರ್ಘಾಟ್ನ ನಿವಾಸಿಯಾದ ವಿದ್ಯಾರ್ಥಿನಿಗೆ ಉಜ್ವಲ್ ಜೊತೆ ಸಂಪರ್ಕವಿತ್ತು ಬಳಿಕ ಅದು ಪ್ರೀತಿಯಾಗಿ ಮುಂದುವರೆದಿತ್ತು. ಆದರೆ ಪುರುಲಿಯಾ ನಿವಾಸಿ ಉಜ್ವಲ್ ವಿದ್ಯಾರ್ಥಿನಿಯನ್ನು ಮದುವೆಯಾಗಲು ಸಿದ್ಧನಿರಲಿಲ್ಲ, ತನ್ನ ಮಗಳು ಮದುವೆಗೆ ಒತ್ತಾಯಿಸುತ್ತಿದ್ದರಿಂದ, ಇಬ್ಬರ ನಡುವೆ ನಿರಂತರವಾಗಿ ಜಗಳಗಳು ನಡೆಯುತ್ತಿತ್ತು ಎಂದು ಆಕೆಯ ತಾಯಿ ಅಲ್ಪನಾ ತುಡು ಆರೋಪಿಸಿದ್ದಾರೆ.
ನಿನ್ನೆ ಆತನಿಂದ ನಮಗೆ ಫೋನ್ ಕಾಲ್ ಬಂದಿತ್ತು, ನಿಮ್ಮ ಮಗಳು ತೀವ್ರ ಅಸ್ವಸ್ಥಳಾಗಿದ್ದು, ಮಾಲ್ಡಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಹೇಳಿದ್ದ, ಇಂದು ಆಕೆ ಮೃತಪಟ್ಟಿದ್ದಾಳೆಂದು ನಮಗೆ ತಿಳಿಸಲಾಯಿತು. ಅವಳು ಅವನನ್ನು ಮದುವೆಯಾಗುವಂತೆ ಕೇಳುತ್ತಿದ್ದಳು ಎಂಬುದು ನಮಗೆ ತಿಳಿದು ಬಂದಿದೆ. ನಮ್ಮ ಮಗಳು ಕಳೆದ ಭಾನುವಾರ ನಮ್ಮ ಬಾಲೂರ್ಘಾಟ್ ನಿವಾಸಕ್ಕೆ ಭೇಟಿ ನೀಡಿ ಮರುದಿನ ಕೋಲ್ಕತ್ತಾಗೆ ತೆರಳಿದ್ದಳು. ನಂತರ ಅವಳು ಮಾಲ್ಡಾಕ್ಕೆ ಬಂದು ಅಸ್ವಸ್ಥಳಾದದ್ದು ಹೇಗೆ? ಪೊಲೀಸರು ಅವನನ್ನು ವಿಚಾರಣೆ ನಡೆಸಬೇಕೆಂದು ನಾವು ಬಯಸುತ್ತೇವೆ ಎಂದು ತಾಯಿ ಹೇಳಿದ್ದಾರೆ.
ಪೊಲೀಸರು ಆತನನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ. ಕಳೆದ ವರ್ಷ ಆರ್ಜಿ ಕರ್ ಆಸ್ಪತ್ರೆಯಲ್ಲಿ ರಾತ್ರಿ ಕರ್ತವ್ಯದ ಸಮಯದಲ್ಲಿ ನಡೆದ ಮಹಿಳಾ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ದೇಶಾದ್ಯಂತ ಆಕ್ರೋಶ ಮತ್ತು ಕೋಲಾಹಲಕ್ಕೆ ಕಾರಣವಾಗಿತ್ತು.