ವಿಜಯಪುರ, ಸೆ. 01 (DaijiworldNews/AA): ವಿಜಯೇಂದ್ರನಿಗೆ ಬೇರೆ ಬಂಡವಾಳವಿಲ್ಲ, ಧರ್ಮಸ್ಥಳ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದ್ದಾನೆ ಎಂದು ಸಚಿವ ಎಂ.ಬಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಧರ್ಮಸ್ಥಳ ವಿಚಾರದಲ್ಲಿ ನಾವು ಮೊದಲು ಎಸ್ಐಟಿ ರಚಿಸಿದಾಗ ಬಿಜೆಪಿಯವರು ಸ್ವಾಗತಿಸಿದ್ದರು. ಆದರೆ ಮುಸುಕುಧಾರಿ ತೋರಿಸಿದ ಜಾಗದಲ್ಲಿ ಏನೂ ಸಿಗದೇ ಇದ್ದ ಕಾರಣ ಇದೀಗ ತಿರುಗಿ ಬಿದ್ದಿದ್ದಾರೆ. ವಿಜಯೇಂದ್ರನಿಗೆ ಬೇರೆ ಬಂಡವಾಳ ಇಲ್ಲ. ಅಪಪ್ರಚಾರ ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದ್ದಾನೆ" ಎಂದು ಕಿಡಿಕಾರಿದರು.
"ನಮ್ಮ ಜಾಗದಲ್ಲಿ ಬಿಜೆಪಿಯವರೇನಾದರೂ ಇದ್ದರೆ ಅವರೂ ಎಸ್ಐಟಿ ರಚಿಸುತ್ತಿದ್ದರು. ಆದರೆ ಇದೀಗ ದುರುಪಯೋಗಪಡಿಸಿಕೊಳ್ಳಲು ಹೊರಟಿದ್ದಾರೆ. ನಾವು ಎಸ್ಐಟಿ ರಚನೆ ಮಾಡುವ ಮೂಲಕ ಶ್ರೀ ಕ್ಷೇತ್ರ ಮಂಜುನಾಥ ಸ್ವಾಮಿ ಸನ್ನಿಧಾನ ಹಾಗೂ ಧರ್ಮದರ್ಶಿಗಳ ಮೇಲೆ ಇದ್ದಂತಹ ಕಳಂಕವನ್ನು ತೆಗೆದುಹಾಕಿದ್ದೇವೆ. ಜನರ ನಂಬಿಕೆಯನ್ನು ಹೆಚ್ಚಿಸಿದ್ದೇವೆ. ಎಸ್ಐಟಿ ಅವರು ಈಗಲೂ ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ದೆಹಲಿಗೆ ಹೋಗಿ ಯಾರೆಲ್ಲ ಇದ್ದಾರೆ ಎನ್ನುವ ತನಿಖೆ ಮಾಡ್ತಿದೆ" ಎಂದು ವಾಗ್ದಾಳಿ ನಡೆಸಿದರು.