ಬೆಂಗಳೂರು, ಜು. 29 (DaijiworldNews/AA): ಡಿಕೆ ಶಿವಕುಮಾರ್ ಅವರು ಉಡಾಫೆ ಬಿಟ್ಟು ರಾಜ್ಯದ ಅಭಿವೃದ್ಧಿ ಕಡೆ ಗಮನ ಕೊಡಲಿ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಜೆಡಿಎಸ್ ಪಕ್ಷದ ಕಾಲ ಮುಗಿಯಿತು ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ.
ಶಿವಕುಮಾರಣ್ಣ, ಪ್ರಾದೇಶಿಕ ಪಕ್ಷ ಕಟ್ಟುವುದು, ಯಾರೋ ಗೆದ್ದ ಕಪ್ ಹಿಡಿದು ಮುತ್ತಿಟ್ಟು, ರೀಲ್ಸ್ ಮಾಡುವಷ್ಟು ಸುಲಭವಲ್ಲ. ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಕೂಡ ನಿಗಮ ಮಂಡಳಿಗಳಲ್ಲಿ ನಿಮ್ಮ ಕಾರ್ಯಕರ್ತರಿಗೆ ಅಧಿಕಾರ ಕೊಡುವ ಯೋಗ್ಯತೆ ಇಲ್ಲ. ಆದರೂ ನಮ್ಮ ಕಾರ್ಯಕರ್ತರನ್ನು ಪಕ್ಷಕ್ಕೆ ಕರೆಯುತ್ತಿದ್ದಾರೆ. ಇದೇ ಉತ್ಸಾಹ ಬೆಂಗಳೂರಿನ ರಸ್ತೆಗಳ ಗುಂಡಿ ಮುಚ್ಚುವ ಬಗ್ಗೆ ಇದ್ದಿದ್ದರೆ ಸ್ವಲ್ಪ ಮರ್ಯಾದೆಯಾದರೂ ಉಳಿಯುತ್ತಿತ್ತು. ಉಡಾಫೆ ಬಿಟ್ಟು ರಾಜ್ಯದ ಅಭಿವೃದ್ಧಿಯ ಬಗ್ಗೆ ಗಮನ ಹರಸಿ ಎಂದು ಪೋಸ್ಟ್ ಮಾಡಿದ್ದಾರೆ.
ತಾಯಿ ಚಾಮುಂಡೇಶ್ವರಿಯ ಆಶೀರ್ವಾದ, ಮಾನ್ಯ ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್.ಡಿ.ದೇವೇಗೌಡ ಅವರು ಮತ್ತು ಮಾಜಿ ಸಿಎಂ ಹಾಗೂ ಕೇಂದ್ರ ಸಚಿವರಾಗಿರುವ ಕುಮಾರಣ್ಣನವರ ವರ್ಚಸ್ಸಿನ ಮುಂದೆ ನಿಮ್ಮ ಮಾತುಗಳಿಗೆ ಕವಡೆಕಾಸಿನ ಕಿಮ್ಮತ್ತು ಕೊಡುವವರು ಯಾರು ಇಲ್ಲ. 'ಗ್ಯಾರಂಟಿ' ಅನುಷ್ಠಾನ ಸಮಿತಿ ಹೆಸರಿನಲ್ಲಿ, ರಾಜ್ಯದ ಜನರ ತೆರಿಗೆ ಹಣದಲ್ಲಿ 'ಗೌರವ' ಧನ ಪಡೆದು ಕೆಲಸ ಮಾಡುತ್ತಿರುವ ಗಂಜಿ ಗಿರಾಕಿ ಕಾಂಗ್ರೆಸ್ ಕಾರ್ಯಕರ್ತರ ರೀತಿಯಲ್ಲ ನಮ್ಮವರು. ಜೆಡಿಎಸ್ನ ಕಾರ್ಯಕರ್ತರು ನಿಷ್ಠಾವಂತರು ಎಂದು ತಿಳಿಸಿದ್ದಾರೆ.