ಶಿವಮೊಗ್ಗ, ಜು. 12 (DaijiworldNews/AA): ನಗರದ ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿದ್ದ ಕೈದಿಯೊಬ್ಬ ಮೊಬೈಲ್ ಫೋನ್ ನುಂಗಿದ್ದು, ಅದನ್ನು ಜುಲೈ ೮ರಂದು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ. ಬಳಿಕ ಮೊಬೈಲ್ ಅನ್ನು ಜೈಲು ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ದೌಲತ್ ಅಲಿಯಾಸ್ ಗುಂಡ (30) ಎಂಬಾತನ ಹೊಟ್ಟೆಯಲ್ಲಿ ಒಂದು ಇಂಚು ಅಗಲದ, ಮೂರು ಇಂಚು ಉದ್ದದ ಮೊಬೈಲ್ ಫೋನ್ ಪತ್ತೆಯಾಗಿದೆ. ಪ್ರಕರಣವೊಂದರಲ್ಲಿ ದೌಲತ್ಗೆ ಶಿವಮೊಗ್ಗದ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಬಳಿಕ ಈತನನ್ನು ಜೈಲಿಗೆ ಕಳುಹಿಸಲಾಗಿತ್ತು. ಜೂ.24 ರಂದು ಜೈಲಿನ ಆಸ್ಪತ್ರೆಗೆ ಬಂದು, ಕಲ್ಲು ನುಂಗಿದ್ದೇನೆ ಎಂದು ವೈದ್ಯರಿಗೆ ಗುಂಡ ತಿಳಿಸಿದ್ದ.
ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದ್ದರು. ಎಕ್ಸ್ ರೇ ಮಾಡಿದಾಗ ದೌಲತ್ನ ಹೊಟ್ಟೆಯಲ್ಲಿ ವಸ್ತುವೊಂದು ಇರುವುದು ಗೊತ್ತಾಗಿತ್ತು. ಶಸ್ತ್ರಚಿಕಿತ್ಸೆ ನಡೆಸಿದಾಗ ಮೊಬೈಲ್ ಫೋನ್ ಪತ್ತೆಯಾಗಿದ್ದು, ಈ ಸಂಬಂಧ ತನಿಖೆ ನಡೆಯುತ್ತಿದೆ.
ಆದರೆ, ಕೈದಿ ಮೊಬೈಲ್ ಫೋನ್ ನುಂಗಲು ಕಾರಣವೇನೆಂದು ಜೈಲು ಅಧಿಕಾರಿಗಳಿಗೆ ಇನ್ನೂ ತಿಳಿದುಬಂದಿಲ್ಲ. "ಕೈದಿ ಜೈಲಿನೊಳಗೆ ಮೊಬೈಲ್ ಹೇಗೆ ಪಡೆದುಕೊಂಡ?" ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಶಿವಮೊಗ್ಗದ ತುಂಗಾ ಪೊಲೀಸ್ ಠಾಣೆಯಲ್ಲಿ ಜೈಲಿನ ಮುಖ್ಯ ಅಧೀಕ್ಷಕ ಡಾ. ಪಿ. ರಂಗನಾಥ್ ದೂರು ದಾಖಲಿಸಿದ್ದಾರೆ.
ಇನ್ನು "ಕೈದಿಯ ಹೊಟ್ಟೆಯೊಳಗೆ ಮೊಬೈಲ್ ಇದ್ದರೂ ಯಾವುದೇ ತೊಂದರೆಯಿಲ್ಲದೆ ಆತ ಆಹಾರ ಸೇವಿಸುತ್ತಿದ್ದ ಮತ್ತು ಉತ್ತಮವಾಗಿದ್ದ" ಎಂದು ಜೈಲಿನ ಮುಖ್ಯ ಅಧೀಕ್ಷಕರು ತಿಳಿಸಿದ್ದಾರೆ.