ನವದೆಹಲಿ, ಜೂ. 25 (DaijiworldNews/AK): ಭಾರತ, ಹಂಗೇರಿ, ಪೋಲೆಂಡ್ ಮತ್ತು ಅಮೆರಿಕದಿಂದ ಗಗನಯಾತ್ರಿಗಳನ್ನು ಹೊತ್ತ ಅಂತಾರಾಷ್ಟ್ರೀಯ ಬಾಹ್ಯಾಕಾಶ ಯಾನದ ಯಶಸ್ವಿ ಉಡಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಸ್ವಾಗತಿಸಿದ್ದಾರೆ.

ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುತ್ತಿರುವ ಮೊದಲ ಭಾರತೀಯರಾಗುತ್ತಿರುವುದು ಭಾರತ ದೇಶಕ್ಕೆ ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ. ಭಾರತೀಯ ಗಗನಯಾತ್ರಿ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗುವ ಮೊದಲ ಭಾರತೀಯರಾಗುವ ಹಾದಿಯಲ್ಲಿದ್ದಾರೆ. ಅವರು 1.4 ಬಿಲಿಯನ್ ಭಾರತೀಯರ ಆಶಯಗಳು, ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ತಮ್ಮೊಂದಿಗೆ ಹೊತ್ತುಕೊಂಡು ಹೋಗಿದ್ದಾರೆ” ಎಂದು ಪ್ರಧಾನಿ ಮೋದಿ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಜೊತೆಗೆ ಪ್ರಧಾನಿ ಮೋದಿ ಶುಭಾಂಶು ಶುಕ್ಲಾ ಅವರ ಜೊತೆಗಿರುವ ನಾಲ್ವರು ಗಗನಯಾತ್ರಿಗಳಿಗೆ ಕೂಡ ಶುಭಾಶಯಗಳನ್ನು ಕೋರಿದರು. ಗ್ರೂಪ್ ಕ್ಯಾಪ್ಟನ್ ಶುಕ್ಲಾ, ಮಿಷನ್ ಕಮಾಂಡರ್ ಡಾ. ಪೆಗ್ಗಿ ವಿಟ್ಸನ್ (ಯುಎಸ್), ಮತ್ತು ಮಿಷನ್ ತಜ್ಞರು ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ (ಪೋಲೆಂಡ್) ಮತ್ತು ಟಿಬೋರ್ ಕಪು (ಹಂಗೇರಿ) ಅವರಿಗೂ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.