ನವದೆಹಲಿ, ಜೂ. 25 (DaijiworldNews/AK): ಪ್ರಧಾನಿ ನರೇಂದ್ರ ಮೋದಿ ಅವರನ್ನು ಪದೇ ಪದೇ ಹೊಗಳಿದ್ದಕ್ಕಾಗಿ ಪಕ್ಷದ ಹಿರಿಯ ನಾಯಕ ಶಶಿ ತರೂರ್ ಅವರನ್ನು ಬುಧವಾರ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು. ಕೆಲವರಿಗೆ ಮೋದಿಯೇ ಮೊದಲು ಎಂದು ಶಶಿ ತರೂರ್ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿಯನ್ನು ನಡೆಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, ಶಶಿ ತರೂರ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಭಾಗವಾಗಿರುವುದಕ್ಕೆ ಒಂದೇ ಕಾರಣ ಅವರ ಇಂಗ್ಲಿಷ್ ತುಂಬಾ ಒಳ್ಳೆಯದಿದೆ ಎಂದು ಹೇಳಿದ್ದಾರೆ.
ನನಗೆ ಇಂಗ್ಲಿಷ್ ಓದಲು ಬರುವುದಿಲ್ಲ, ಅವರ ಭಾಷೆ ತುಂಬಾ ಚೆನ್ನಾಗಿದೆ. ಅದಕ್ಕಾಗಿಯೇ ನಾವು ಅವರನ್ನು ಪಕ್ಷದ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಮಾಡಿದ್ದೇವೆ. ಆದರೆ ನಾನು ಹೇಳಲು ಬಯಸುವುದೇನೆಂದರೆ, ನಾವೆಲ್ಲರೂ, ಇಡೀ ವಿರೋಧ ಪಕ್ಷ ಒಗ್ಗಟ್ಟಿನಿಂದ ನಮ್ಮ ಸೈನ್ಯದೊಂದಿಗೆ ಇದ್ದೇವೆ ಎಂದರು.
ಕೇಂದ್ರವು ತನ್ನ ಆಡಳಿತ ವೈಫಲ್ಯವನ್ನು ಮರೆಮಾಚಲು ʼಸಂವಿಧಾನ ಹತ್ಯಾ ದಿವಸ್ʼ ನಾಟಕವಾಡುತ್ತಿದೆ. ಸಹಿಷ್ಣುತೆ ಇಲ್ಲದ ಮತ್ತು ಭ್ರಾತೃತ್ವ ಮತ್ತು ಸ್ವಾತಂತ್ರ್ಯವನ್ನು ಸಮೃದ್ಧಗೊಳಿಸಲು ಬಿಡದ ಸರಕಾರಕ್ಕೆ ಇತರರಿಗೆ ಉಪನ್ಯಾಸ ನೀಡುವ ಹಕ್ಕಿಲ್ಲ ಎಂದು ಹೇಳಿದರು.