ಬೆಂಗಳೂರು, ಜೂ. 21 (DaijiworldNews/AA): "ಸದ್ಯಕ್ಕೆ ನಾನು ಬಿಜೆಪಿಗೆ ಮರಳುವುದಿಲ್ಲ, ಮೊದಲು ಬಿಜೆಪಿಯಲ್ಲಿನ ಪರಿಸ್ಥಿತಿ ಸರಿ ಹೋಗಬೇಕು" ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸದ್ಯಕ್ಕೆ ನಾನು ಬಿಜೆಪಿಗೆ ಮರಳುವ ಪರಿಸ್ಥಿತಿಯಲ್ಲಿಲ್ಲ. ಮೊದಲು ಬಿಜೆಪಿ ಪರಿಸ್ಥಿತಿ ಸರಿಯಾಗಬೇಕು. ವಿಜಯೇಂದ್ರ ಆಹ್ವಾನ ಕೊಟ್ಟಿರುವ ಬಗ್ಗೆ ಗೊತ್ತಿಲ್ಲ. ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ" ಎಂದು ತಿಳಿಸಿದರು.
"ಇನ್ನು, ನನ್ನ ಯಡಿಯೂರಪ್ಪ ಸ್ನೇಹ ಬಹಳ ಹಳೆಯದು, ಇವತ್ತಿನದಲ್ಲ. ನಾವಿಬ್ಬರೂ ಪಾರ್ಟ್ನರ್ಶಿಪ್ನಲ್ಲಿ ಹಿಂದೆ ಫ್ಯಾಕ್ಟರಿ ಮಾಡಿದ್ದೆವು. ನಮ್ಮಿಬ್ಬರ ಮಧ್ಯೆ ಸ್ನೇಹ ಮುಂದುವರೆಯುತ್ತಿದೆ. ರಾಜಕಾರಣಕ್ಕೂ ಸ್ನೇಹಕ್ಕೂ ಸಂಬಂಧ ಇಲ್ಲ. ನನ್ನ ಹುಟ್ಟುಹಬ್ಬಕ್ಕೆ ಪತ್ರಿಕೆಯಲ್ಲೂ ಅವರು ಶುಭಾಶಯ ಕೋರಿಕೆ ಹಾಕಿಸಿದ್ದರು. ನಮ್ಮ ಮನೆಯ ಕಾರ್ಯಕ್ರಮಗಳಿಗೆ ಅವರು ಬಂದಿದ್ದಾರೆ. ಅವರ ಮನೆ ಕಾರ್ಯಕ್ರಮಗಳಿಗೆ ನಾವು ಹೋಗಿದ್ದೇವೆ. ಸ್ನೇಹ ಬೇರೆ ರಾಜಕಾರಣ ಬೇರೆ" ಎಂದು ಹೇಳಿದರು.
ಕಾಂಗ್ರೆಸ್ ಮತ್ತೆ ಅಧಿಕಾರ ಪಡೆಯಲು ಅಲ್ಪಸಂಖ್ಯಾತರ ಗುಲಾಮ ಆಗಿದೆ
ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ 15% ಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು, "ವಸತಿ ಯೋಜನೆಗಳಲ್ಲಿ ಮುಸ್ಲಿಮರಿಗೆ 15% ಮೀಸಲಾತಿಗೆ ನಮ್ಮ ವಿರೋಧವಿದೆ. ಕಾಂಗ್ರೆಸ್ ಮತ್ತೆ ಅಧಿಕಾರ ಪಡೆಯಲು ಅಲ್ಪಸಂಖ್ಯಾತರ ಗುಲಾಮ ಆಗಿದೆ. ಹಿಂದುಳಿದವರು, ದಲಿತರಿಗೆ ಅನ್ಯಾಯ ಆಗಿದೆ. ಜಮೀರ್ ಅಹ್ಮದ್ ಹೆಚ್ಡಿಕೆ ಅವಧಿಯ ಉಪಸಂಪುಟ ಸಮಿತಿ ನೆಪ ಕೊಟ್ಟು ತಪ್ಪಿಸಿಕೊಳ್ಳಲು ಆಗಲ್ಲ. ಅಂಥವು ನೂರು ಉಪಸಂಪುಟ ಸಮಿತಿಗಳಾಗುತ್ತವೆ. ಸುಳ್ಳು ಹೇಳಿ ಜಮೀರ್ ದಾರಿ ತಪ್ಪಿಸಬಾರದು. ಜಮೀರ್ ಅಹ್ಮದ್ ದೊಡ್ಡ ಸುಳ್ಳುಗಾರ. ಸಿದ್ದರಾಮಯ್ಯಗೂ ಸುಳ್ಳು ಹೇಳಿ ಅನುಕೂಲ ಮಾಡಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಜಮೀರ್ ಅಹ್ಮದ್ ಬಗ್ಗೆ ಹುಷಾರಾಗಿರಬೇಕು" ಎಂದರು.
"ಸಿದ್ದರಾಮಯ್ಯ ಹಿಂದುಳಿದವರು ಹಾಗೂ ದಲಿತರಿಗೆ ಅನ್ಯಾಯ ಆಗಲು ಬಿಡಬಾರದು. ಅಹಿಂದ ಹೆಸರೇಳಿಕೊಂಡು ಮೇಲೆ ಬಂದ ಸಿದ್ದರಾಮಯ್ಯ ಈಗ ಹಿಂದ ಮರೆತು ಕೇವಲ ಅ ಅ ಅ ಅಂತಿದ್ದಾರೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಏನೆಲ್ಲ ಬೇಕೋ ಎಲ್ಲ ಮಾಡುತ್ತಿದ್ದಾರೆ, ಇದು ದುರಾದೃಷ್ಟಕರ. 15% ಮೀಸಲಾತಿ ಕೊಡಲು ನಾವು ಬಿಡಲ್ಲ, ಹೋರಾಟ ಮಾಡುತ್ತೇವೆ. ಬರೀ ಮುಸಲ್ಮಾನರ ಕಡೆ ಸರ್ಕಾರ ತಿರುಗಿದರೆ ಭಾರೀ ಪೆಟ್ಟು ಖಚಿತ. ಮುಸ್ಲಿಮರನ್ನು ತೃಪ್ತಿ ಪಡಿಸುವ ಕೆಲಸ ಯಾರೂ ಒಪ್ಪಲ್ಲ. ಇದನ್ನು ರಾಜ್ಯಪಾಲರ ಒಪ್ಪಿಗೆಗೆ ಕಳಿಸಿದರೆ ಸಹಿ ಹಾಕಬಾರದು. ಈ ನಿರ್ಣಯವನ್ನು ಸರ್ಕಾರ ಹಿಂಪಡೆಯಬೇಕು" ಎಂದು ಆಗ್ರಹಿಸಿದರು.