ಬೆಂಗಳೂರು, ಜೂ. 19 (DaijiworldNews/AK):ರಾಜ್ಯದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರದ ಎಲ್ಲ ನಿಗಮಗಳಲ್ಲಿ ಆಶ್ರಯ ಮನೆಗಳಿಗೆ ನೀಡುವ ಹಣದ ಮೀಸಲಾತಿ ಪ್ರಮಾಣವನ್ನು ಮುಸ್ಲಿಂ ಸಮುದಾಯಕ್ಕೆ ಶೇ 10 ರಿಂದ 15 ಕ್ಕೆ ಏರಿಸಿರುವುದು ಅತ್ಯಂತ ಕಳವಳಕಾರಿ ಸಂಗತಿ.

ಸರ್ಕಾರ ಏಕಾಏಕಿ ಮುಸಲ್ಮಾನರ ಮೀಸಲಾತಿಯ ಪ್ರಮಾಣವನ್ನು ಹೆಚ್ಚಳ ಮಾಡುವಂತೆ ಪ್ರಯತ್ನ ಮಾಡಿರುವುದು ಅತ್ಯಂತ ಖಂಡನೀಯ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹತ್ತಾರು ವೈಫಲ್ಯಗಳಿಂದ ಸರ್ಕಾರ ಬಳಲುತ್ತಿದೆ. ಈ ಸಂದರ್ಭದಲ್ಲಿ ಇಂತಹ ನಿರ್ಣಯಗಳು ಇನ್ನೊಂದು ರೀತಿಯ ಚರ್ಚೆಗಳನ್ನು ಹುಟ್ಟುಹಾಕಬೇಕು ಮತ್ತು ಮುಸಲ್ಮಾನರನ್ನು ತುಷ್ಟೀಕರಿಸಬೇಕು ಎನ್ನುವ ಪ್ರಯತ್ನ ಸರಿಯಲ್ಲ ಎಂದು ಆಕ್ಷೇಪಿಸಿದರು.
ಈ ನಡೆಯಿಂದ ಬೇರೆ ಬೇರೆ ವೈಫಲ್ಯಗಳನ್ನು ಮುಚ್ಚಿಹಾಕಿಕೊಳ್ಳುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು. ಈ ಸರ್ಕಾರದ ಬಂದ ನಂತರ 2 ವರ್ಷಗಳ ಅವಧಿಯಲ್ಲಿ ಆಶ್ರಯ ಮನೆಗಳಿಗೆ ಹಣವನ್ನು ಕೊಟ್ಟಿಲ್ಲ. 3ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಹಣ ಬಿಡುಗಡೆ ಮಾಡುವ ಮೊದಲೇ ಮುಸಲ್ಮಾನರಿಗೆ ಆದ್ಯತೆಯ ನಿರ್ಧಾರ ತೆಗೆದುಕೊಂಡಿದ್ದು, ಉಳಿದ ಸಮುದಾಯಗಳು ಲೆಕ್ಕಕ್ಕೆ ಇಲ್ಲ ಎನ್ನುವ ಮಟ್ಟಿಗೆ ಈ ಸರ್ಕಾರದ ವರ್ತನೆ ಕಂಡುಬರುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಕಳೆದ ಬಾರಿ ಅಧಿವೇಶನದಲ್ಲಿ ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡಿ, ಸಂವಿಧಾನದ ವಿರುದ್ಧವಾಗಿ ನಿರ್ಣಯ ತೆಗೆದುಕೊಂಡಿತ್ತು. ಈ ಮೀಸಲಾತಿಗೆ ಮಾನ್ಯ ರಾಜ್ಯಪಾಲರು ಅಂಕಿತ ಹಾಕಲಿಲ್ಲ. ಪ್ರಸ್ತುತ ಗೌರವಾನ್ವಿತ ರಾಷ್ಟ್ರಪತಿಯವರ ಅಂಗಳದಲ್ಲಿ ಇದೆ ಎಂದು ಅವರು ತಿಳಿಸಿದರು.