ಕಲಬುರ್ಗಿ, ಜೂ. 14 (DaijiworldNews/AK): ದೇಶ- ರಾಜ್ಯಗಳ ಚುನಾವಣೆ ಏಕಕಾಲಕ್ಕೆ ಆಗಬೇಕೆಂಬ ಸಹಜ ಅಪೇಕ್ಷೆ ಜನರಲ್ಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತಿಳಿಸಿದ್ದಾರೆ.

ಇಂದು ಇಲ್ಲಿ ಏರ್ಪಡಿಸಿದ್ದ ‘ಒಂದು ದೇಶ ಒಂದು ಚುನಾವಣೆ’ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಒಂದು ದೇಶ ಒಂದು ಚುನಾವಣೆ ಎಂದರೆ ಇವರು ಗಾಬರಿ ಪಡುವ ಅಗತ್ಯವಿಲ್ಲ. 1952ರಲ್ಲಿ ಮೊದಲನೇ ಚುನಾವಣೆ ಆಗಿತ್ತು. 1952, 1957, 1962 ಮತ್ತು 1967- ಹೀಗೆ 4 ಬಾರಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ಒಟ್ಟಿಗೆ ನಡೆದಿತ್ತು ಎಂದು ಅವರು ತಿಳಿಸಿದರು.
1967ರ ಬಳಿಕ ರೋಗ ಶುರುವಾಯಿತು. ಕೇರಳದಲ್ಲಿ ನಂಬೂದರಿಪಾಡ್ ಅವರ ಸರಕಾರ ಇತ್ತು. ಆ ಸರಕಾರವನ್ನು ಇವರಿಗೆ ತಡೆದುಕೊಳ್ಳಲಾಗಲಿಲ್ಲ; ಆರ್ಟಿಕಲ್ 356 ಬಳಸಿ ಸರಕಾರವನ್ನೇ ವಜಾ ಮಾಡಿದ್ದರು. 125 ಬಾರಿ ಚುನಾಯಿತ ರಾಜ್ಯ ಸರಕಾರಗಳನ್ನು ಇವರು ವಜಾ (ಬರ್ಖಾಸ್ತು) ಮಾಡಿದ್ದರು. ಕಾಂಗ್ರೆಸ್ ಅವಧಿಯಲ್ಲಿ 90 ರಾಜ್ಯ ಸರಕಾರಗಳನ್ನು ವಜಾ ಮಾಡಿದ್ದರು. ಅದರಲ್ಲಿ 39 ಬಾರಿ ಶ್ರೀಮತಿ ಇಂದಿರಾ ಗಾಂಧಿಯವರು ಸರಕಾರ ವಜಾ ಮಾಡಿದ್ದರು. ಅಸಹಿಷ್ಣುತೆಯೇ ಇದಕ್ಕೆ ಕಾರಣ ಎಂದು ಅವರು ವಿಶ್ಲೇಷಿಸಿದರು.
ಯಾರು ತಮ್ಮ ಮಾತು ಕೇಳುವುದಿಲ್ಲವೋ ಅವರನ್ನು ವಜಾ ಮಾಡಿ, ಕಾಂಗ್ರೆಸ್ ಸರಕಾರ ಅಥವಾ ರಾಷ್ಟ್ರಪತಿ ಆಳ್ವಿಕೆ ವಿಧಿಸುತ್ತಿದ್ದರು. ಈ ಪದ್ಧತಿಯಿಂದ ಇವತ್ತು ಈ ಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕದ ವಿಧಾನಪರಿಷತ್ತಿಗೆ 2023ರಲ್ಲಿ ಚುನಾವಣೆ ಆಗಿತ್ತು. 2024ರ ಏಪ್ರಿಲ್- ಮೇ ತಿಂಗಳಲ್ಲಿ ಸಂಸತ್ತಿಗೆ ಚುನಾವಣೆ ನಡೆಯಿತು. ಇದಾದ ಬಳಿಕ ಜಾರ್ಖಂಡ್, ಮಹಾರಾಷ್ಟ್ರ, ದೆಹಲಿ, ಒಡಿಶಾ, ಹರಿಯಾಣ ರಾಜ್ಯಗಳ ಚುನಾವಣೆ ನಡೆದಿದೆ ಎಂದು ವಿವರ ನೀಡಿದರು.
ಜನರಲ್ಲಿ ಏಕಕಾಲದ ಚುನಾವಣೆಯ ಅಪೇಕ್ಷೆ ಇದ್ದರೂ ಮಧ್ಯೆ ಬಂದ ರೋಗದಿಂದ ಸಮಸ್ಯೆ ನಿರ್ಮಾಣವಾಗುತ್ತ ಹೋಗಿದೆ ಎಂದು ತಿಳಿಸಿದರು.
ನಮ್ಮಲ್ಲಿ ಶಕ್ತಿಯುತ ಪ್ರಜಾಪ್ರಭುತ್ವ ಇದೆ. ಪ್ರಜಾಪ್ರಭುತ್ವದ ಮೂಲ ಭಾರತದಲ್ಲಿದೆ. ನೈಸರ್ಗಿಕ ಸಂಪತ್ತು ಸೇರಿ ಸಂಪದ್ಭರಿತ ರಾಷ್ಟ್ರ ನಮ್ಮದು. 2060ರವರೆಗೂ ಭಾರತವು ಜಗತ್ತಿನ ಅತ್ಯಂತ ಯುವರಾಷ್ಟ್ರವಾಗಿ ಇರಲಿದೆ. ಭಾರತವು ಇದರ ಪರಿಣಾಮವಾಗಿ ಉತ್ಪಾದನಾ ಹಬ್ ಆಗಿ ಪರಿವರ್ತನೆಗೊಳ್ಳಲಿದೆ. ಆಗ ನಾವು 12 ತಿಂಗಳೂ ಚುನಾವಣೆ ಮಾಡುತ್ತ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಭಾರತದಲ್ಲಿ ಒನ್ ನೇಷನ್ ಒನ್ ರೇಷನ್ ಕಾರ್ಡ್ ಮಾಡಿದ್ದೇವೆ. ಅವರು ಆಶ್ವಾಸನೆ ಕೊಟ್ಟು ಜಾರಿಗೊಳಿಸದ ಒನ್ ನೇಷನ್ ಒನ್ ರ್ಯಾಂಕ್ ಮಾಡಿದ್ದೇವೆ. ಒನ್ ನೇಷನ್ ಒನ್ ಗ್ರಿಡ್ ಮಾಡಿದ್ದೇವೆ. ವಿದ್ಯುತ್ ಉತ್ಪಾದನೆ, ಸರಬರಾಜಿನಲ್ಲಿ ಸಮಸ್ಯೆ ಇತ್ತು. ಗುಲ್ಬರ್ಗ ಸೇರಿ ದೇಶದ ವಿವಿಧೆಡೆ ವಿದ್ಯುತ್ ಕಡಿತ ಸಾಮಾನ್ಯವಾಗಿತ್ತು. ಒಂದೇ ಗ್ರಿಡ್ನಿಂದ ದೇಶದೊಳಗೆ ವಿದ್ಯುತ್ ಕೊರತೆ ಶೇ 0.01ರಷ್ಟಕ್ಕೆ ಇಳಿದಿದೆ ಎಂದು ವಿವರಿಸಿದರು.