ಬೆಂಗಳೂರು, ಜೂ. 14 (DaijiworldNews/AA): ಕೇಂದ್ರ ಸರ್ಕಾರವೇ ಜನಗಣತಿ ಮತ್ತು ಜಾತಿಗಣತಿ ಮಾಡುತ್ತಿರುವಾಗ ರಾಜ್ಯ ಸರ್ಕಾರದಿಂದ ಮತ್ತೊಂದು ಜಾತಿಗಣತಿ ಮಾಡುವ ಅವಶ್ಯಕತೆ ಇಲ್ಲ. ತಮ್ಮ ಲಾಭಕ್ಕಾಗಿ ಸರ್ಕಾರ ಜಾತಿಗಣತಿ ಮಾಡಲು ಮುಂದಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಸರ್ಕಾರದ ಹೊಸ ಜಾತಿಗಣತಿ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೇಂದ್ರ ಸರ್ಕಾರ ಜಾತಿಗಣತಿ ಮಾಡುವುದಾಗಿ ಘೋಷಣೆ ಮಾಡಿದೆ. ಕೇಂದ್ರ ಸರ್ಕಾರ ಮಾಡಬೇಕಾದರೆ ರಾಜ್ಯ ಸರ್ಕಾರ ಯಾಕೆ ಜಾತಿಗಣತಿ ಮಾಡಬೇಕು. ತಮ್ಮ ಲಾಭಕ್ಕಾಗಿ ಸರ್ಕಾರ ಜಾತಿಗಣತಿ ಮಾಡಲು ಮುಂದಾಗಿದೆ. ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಮಾಡಿದ ಮೇಲೆ ಹಳೆ ಜಾತಿಗಣತಿ ಬೇಡ ಎಂದು ಸಿಎಂ, ಡಿಸಿಎಂ ನಿರ್ಧಾರ ಮಾಡಿದ್ದಾರೆ. 160-185 ಕೋಟಿ ರೂ. ಖರ್ಚು ಮಾಡಿದ್ದಾರೆ. ಮೊದಲು ಜಾತಿಗಣತಿ ಜಾರಿ ಮಾಡುತ್ತೇವೆ ಎಂದು ಸಿಎಂ ಹೇಳಿದ್ದರು. ಕೇಂದ್ರ ಸರ್ಕಾರವೇ ಜಾತಿಗಣತಿ ಮಾಡುತ್ತಿರುವಾಗ ರಾಜ್ಯ ಸರ್ಕಾರದಿಂದ ಮತ್ತೊಂದು ಜಾತಿಗಣತಿ ಮಾಡುವ ಅವಶ್ಯಕತೆಯಿಲ್ಲ ಎಂದು ತಿಳಿಸಿದರು.
ಈಗಾಗಲೇ 180 ಕೋಟಿ ರೂ. ಖರ್ಚು ಮಾಡಿದ್ದೀರಾ. ಮತ್ತೆ ಜಾತಿಗಣತಿ ಮಾಡಿದರೆ ಮತ್ತೆ ಜನರ ತೆರಿಗೆ ಹಣ ಖರ್ಚು ಆಗುತ್ತದೆ. ಎಷ್ಟೇ ಹಣ ಖರ್ಚು ಮಾಡಿದರೂ ನೀವು ಸರಿಯಾಗಿ ಜಾತಿಗಣತಿ ಮಾಡುವುದಿಲ್ಲ. ನಿಮ್ಮ ರಾಜಕೀಯ ಲಾಭಕ್ಕಾಗಿ ಜಾತಿಗಣತಿ ಘೋಷಣೆ ಮಾಡಿದ್ದೀರಾ. ಕೆಲವು ಸಮುದಾಯಗಳನ್ನ ಮೇಲೆ ಎತ್ತೋದು, ಕೆಲವು ಜಾತಿಗಳನ್ನು ಕೆಳಗೆ ತುಳಿಯೋ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ಜಾತಿಗಣತಿ ಮಾಡೋದು ಬೇಡ ಎಂದು ಹೇಳಿದರು.
ರಾಜ್ಯ ಸರ್ಕಾರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸುತ್ತೇವೆ ಎಂದಿದ್ದಾರೆ. ಆದರೆ ಇಲ್ಲಿ ರಾಜಕೀಯ ಅಜೆಂಡಾ ಮುಂದೆ ಇಟ್ಟುಕೊಂಡು ಇದನ್ನ ಮಾಡುತ್ತಿದ್ದಾರೆ. ನಿಮ್ಮ ನಿಮ್ಮ ರಾಜಕೀಯ ಭವಿಷ್ಯ ಕಟ್ಟೋಕೆ ಈ ಜಾತಿಗಣತಿ ಮಾಡ್ತಿದ್ದೀರಾ. ಕೆಲವು ಜಾತಿ ಜಾಸ್ತಿ ತೋರಿಸೋದು, ಕೆಲವು ಕಡಿಮೆ ತೋರಿಸುವ ಕೆಲಸ ಮಾಡುತ್ತೀರಾ. ರಾಜ್ಯದ ಜಾತಿಗಣತಿ ಉದ್ದೇಶ, ದುರುದ್ದೇಶ ಬೇರೆಯೇ ಇದೆ ಎಂದರು.