ಬೆಂಗಳೂರು, ಜೂ. 12 (DaijiworldNews/AK):ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಬಹುನಿರೀಕ್ಷಿತ ಚಿತ್ರ ʻಕಾಂತಾರ ಚಾಪ್ಟರ್-1ʼ ಸಹ ಕಲಾವಿದ ವಿಜು ವಿ.ಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಇಂದು ತೀರ್ಥಹಳ್ಳಿ ಬ್ಯಾಕ್ ವಾಟರ್ನಲ್ಲಿ ಚಿತ್ರೀಕರಣಕ್ಕೆ ಸಿದ್ಧತೆ ನಡೆದಿತ್ತು. ದೈವದ ನೇಮೋತ್ಸವದ ಚಿತ್ರೀಕರಣಕ್ಕೆ ಕಾಂತಾರ ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿತ್ತು. ದೈವದ ಉತ್ಸವ ಸನ್ನಿವೇಶ ಚಿತ್ರೀಕರಣಕ್ಕಾಗಿ ಬ್ಯಾಕ್ ವಾಟರ್ನಲ್ಲಿ ಅದ್ಧೂರಿ ಸೆಟ್ ಕೂಡ ಹಾಕಲಾಗಿತ್ತು. ಇದೇ ಚಿತ್ರೀಕರಣದಲ್ಲಿ ಕೇರಳದ ನಟ ಬಿಜು ವಿಕೆ ಭಾಗಿಯಾಗಬೇಕಿತ್ತು, ದುರಾದೃಷ್ಟವಶಾತ್ ದೈವದ ಉತ್ಸವ ಚಿತ್ರೀಕರಣಕ್ಕೂ ಮುನ್ನ ಸಹ ಕಲಾವಿದ ಸಾವನ್ನಪ್ಪಿದ್ದಾರೆ.
ಕೇರಳದ ತ್ರಿಶೂರ್ ಮೂಲದ ಮಿಮಿಕ್ರಿ ಕಲಾವಿದ ವಿಜು ಕಾಂತರ ಚಲನಚಿತ್ರಕ್ಕಾಗಿ ಆಗುಂಬೆ ಸಮೀಪದ ಯಡೂರಿನ ಹೋಂ ಸ್ಟೇ ಒಂದರಲ್ಲಿ ತಂಗಿದ್ದರು. ಬುಧವಾರ ರಾತ್ರಿ ಏಕಾಏಕಿ ವಿಜು ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತೀರ್ಥಹಳ್ಳಿಯ ಆಸ್ಪತ್ರೆಗೆ ರವಾನಿಸುವ ವೇಳೆ ಮಾರ್ಗ ಮಧ್ಯೆ ವಿಜು ಕೊನೆಯುಸಿರೆಳೆದಿದ್ದಾರೆ.
ಸದ್ಯ ವಿಜು ಅವರ ಮೃತದೇಹ ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆಯಲ್ಲಿರಿಸಲಾಗಿದೆ. ಪೊಲೀಸರು ಕೇರಳದಿಂದ ವಿಜು ಕುಟುಂಬಸ್ಥರ ಆಗಮನಕ್ಕೆ ಕಾಯುತ್ತಿದ್ದಾರೆ. ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.