ಮೈಸೂರು, ಜೂ. 12 (DaijiworldNews/AA): ಸಿಎಂ ಸಿದ್ದರಾಮಯ್ಯ ಅವರಿಗೆ ಮಾನಸಿಕ ಸ್ಥಿತಿ ಸರಿ ಇಲ್ಲ. ಹೀಗಾಗಿ ಕಾಲ್ತುಳಿತ ಪ್ರಕರಣದಲ್ಲಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಸರ್ಕಾರಕ್ಕೆ ಶೂನ್ಯ ಅಂಕ ಕೊಟ್ಟ ಸಿಎಂ ಕುರಿತು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ಆರು ತಿಂಗಳಲ್ಲಿ ಅಧಿಕಾರದಿಂದ ಹೋಗುವ ಸಿದ್ದರಾಮಯ್ಯ ಕೊಡುವ ಮಾರ್ಕ್ಸ್ ಯಾರಿಗೆ ಬೇಕು. ಸಿದ್ದರಾಮಯ್ಯ ಅವರು ಔಟ್ ಗೋಯಿಂಗ್ ವ್ಯಕ್ತಿ, ಅವರ ಮಾತಿಗೆ ಬೆಲೆ ಇಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯೇ ಇಲ್ಲ. ಗೃಹ ಸಚಿವರು ತಮ್ಮ ಗೃಹಕ್ಕೆ ಮಾತ್ರ ಸಚಿವರಾಗಿದ್ದಾರೆ. ಕೇಂದ್ರದಲ್ಲಿ 11 ವರ್ಷದಿಂದ ಪ್ರಧಾನಿ ನಾನು ಆಗುತ್ತೇನೆ ಎಂದು ಒಬ್ಬರಾದರೂ ಹೇಳಿದ್ದರಾ? ರಾಜ್ಯದಲ್ಲಿ ಎಷ್ಟು ಜನ ಸಿಎಂ ಆಗಲು ಕಾದು ಕೂತಿದ್ದಾರೆ. ಡಿಕೆ ಮಾಟಮಂತ್ರ ಎಲ್ಲಾ ಮಾಡಿಟ್ಟುಕೊಂಡು ಸಿಎಂ ಕುರ್ಚಿಗೆ ಟವೆಲ್ ಸುತ್ತಿದ್ದಾರೆ. ಪರಮೇಶ್ವರ್, ಎಂ.ಬಿ ಪಾಟೀಲ್ ಎಲ್ಲರೂ ಸಿಎಂ ಆಗಲು ಕಾದಿದ್ದಾರೆ. ಕರ್ನಾಟಕದಲ್ಲಿ ಸಿಎಂ ಪದವಿ ಖಾಲಿ ಆಗುತ್ತಿದೆ. ರಾಜ್ಯ ಸರ್ಕಾರ ನೆಗೆದು ಬಿದ್ದು ನೆಲ್ಲಿಕಾಯಿ ಆಗಲಿ. ರಾಜ್ಯದ ಜನ ಇದನ್ನು ಕಾಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್ಸಿಬಿ ಕಾಲ್ತುಳಿತ ಘಟನೆಯಲ್ಲಿ ಮಾನವ ಹಕ್ಕು ಉಲ್ಲಂಘನೆ
ಆರ್ಸಿಬಿ ಕಾಲ್ತುಳಿತ ಪ್ರಕರಣ ಸಂಬಂಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಪ್ರಕರಣ ಮುಚ್ಚಿ ಹಾಕಲು ಮುಂದಾಗಿತ್ತು. ಘಟನೆಯಲ್ಲಿ ಮಾನವ ಹಕ್ಕು ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದೇನೆ ಎಂದರು.
ಖುದ್ದು ರಾಷ್ಟ್ರೀಯ ಮಾನವ ಆಯೋಗದ ಸದಸ್ಯರು ರಾಜ್ಯಕ್ಕೆ ಬರಬೇಕು. ಖುದ್ದು ಅವರೇ ಮಾನವ ಹಕ್ಕುಗಳು ಉಲ್ಲಂಘನೆಯಾಗಿರುವ ಪರಿಶೀಲನೆ ನಡೆಸಬೇಕು. ರಾಜ್ಯ ಸರ್ಕಾರ ಅಧಿಕಾರಿಗಳದ್ದೇ ತಪ್ಪು ಎಂದು ಬಿಂಬಿಸಲು ಹೊರಟಿದೆ. ನ್ಯಾಯಾಲಯಕ್ಕೆ ಅದನ್ನೇ ಹೇಳಲು ಹೊರಟಿದೆ. ಈ ಎಲ್ಲಾ ಕಾರಣಗಳಿಂದ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.