ಹರಿಯಾಣ, ಜೂ. 12 (DaijiworldNews/AA): ಇತ್ತೀಚೆಗೆ ಹರಿಯಾಣ ಸಿಬ್ಬಂದಿ ಆಯ್ಕೆ ಆಯೋಗದ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಕಲಿ ವೆಬ್ಸೈಟ್ ಅನ್ನು ತನಿಖೆಯ ಮೂಲಕ ಪತ್ತೆಹಚ್ಚಿದ ಹರಿಯಾಣದ ಪಂಚಕುಲದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ(ಡಿಎಸ್ಪಿ)ಯಾಗಿ ಕಾರ್ಯನಿರ್ವಹಿಸುತ್ತಿರುವ ಐಪಿಎಸ್ ಅಧಿಕಾರಿ ಸೃಷ್ಟಿ ಗುಪ್ತಾ ಅವರ ಯಶೋಗಾಥೆ ಇದು.

ಆರಂಭದಿಂದಲೂ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ್ದ ಸೃಷ್ಟಿ ಗುಪ್ತಾ ಅವರು ದೆಹಲಿ ಪಬ್ಲಿಕ್ ಸ್ಕೂಲ್ ವಸಂತ್ ಕುಂಜ್ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರೈಸಿದ್ದು, 2011 ರಲ್ಲಿ ಚಿನ್ನದ ಪದಕ ಗಳಿಸುತ್ತಾರೆ. ತಮ್ಮ ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು 2012 ರಲ್ಲಿ JEE ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ದೆಹಲಿ ಕಾಲೇಜ್ ಆಫ್ ಇಂಜಿನಿಯರಿಂಗ್ (ಪ್ರಸ್ತುತ DTU) ನಲ್ಲಿ ಸಿವಿಲ್ ಇಂಜಿನಿಯರಿಂಗ್ನಲ್ಲಿ ಬಿ.ಟೆಕ್ ಪದವಿ ಪಡೆದರು. ಈ ವೇಳೆ ಅವರು ಎಲ್ಲಾ ಸೆಮಿಸ್ಟರ್ಗಳಲ್ಲಿ ಡಿಸ್ಟಿಂಕ್ಷನ್ ಗಳಿಸಿದರು.
ಸೃಷ್ಟಿ ಅವರ ನಿರಂತರ ಶೈಕ್ಷಣಿಕ ಸಾಧನೆಗಾಗಿ 2012 ರಲ್ಲಿ ಅವರಿಗೆ OP ಜಿಂದಾಲ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಸ್ಕಾಲರ್ಶಿಪ್ (OPJEMS) ಸಹ ನೀಡಲಾಯಿತು. ಪದವಿ ಪೂರ್ಣಗೊಂಡ ನಂತರ, ಅವರು ನೊಯ್ಡಾದ ಒಂದು ಕಂಪನಿಯಲ್ಲಿ ಇಂಟರ್ನ್ ಆಗಿ ಕೆಲಸಮಾಡುತ್ತಾರೆ. ಬಳಿಕ ದೆಹಲಿಯ ಸಿಮಾ ಲ್ಯಾಬ್ಸ್ನಲ್ಲಿ ಏಳು ತಿಂಗಳ ಕಾಲ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದರು.
ಸೃಷ್ಟಿ ಅವರಿಗೆ ಯುಪಿಎಸ್ಸಿ ಪರೀಕ್ಷೆ ಬರೆಯಬೇಕೆಂಬ ಹಂಬಲ ಉಂಟಾಗುತ್ತದೆ. ಆದರೆ ಅವರಿಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು 5 ವರ್ಷಗಳು ಬೇಕಾದವು. 2020ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 171 ನೇ ಅಖಿಲ ಭಾರತ ರ್ಯಾಂಕ್ನೊAದಿಗೆ ಉತ್ತೀರ್ಣರಾಗಿ ಐಪಿಎಸ್ ಅಧಿಕಾರಿಯಾಗುತ್ತಾರೆ.
ಸೃಷ್ಟಿ ಅವರು ತಮ್ಮ ಐಪಿಎಸ್ ತರಬೇತಿಯ ನಂತರ, ಅವರು ಹರಿಯಾಣದ ಯಮುನಾನಗರದಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ)ಯಾಗಿ ನಿಯೋಜಿಸಲ್ಪಟ್ಟರು. ಅವರು ಪ್ರಸ್ತುತ ಪಂಚಕುಲದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ)ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಕಲಿ ವೆಬ್ಸೈಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೃಷ್ಟಿ ಗುಪ್ತಾ ಅವರ ಮೇಲ್ವಿಚಾರಣೆಯಲ್ಲಿ ಆರು ಜನರನ್ನು ಬಂಧಿಸಲಾಗಿದ್ದು, ನಕಲಿ ವೆಬ್ಸೈಟ್ ಅನ್ನು ಸ್ಥಗಿತಗೊಳಿಸಲಾಗಿದೆ. ಜೊತೆಗೆ ಹೆಚ್ಚುತ್ತಿರುವ ಮಾದಕವಸ್ತು ಚಟುವಟಿಕೆಗಳ ವಿರುದ್ಧ ಕ್ರಮವನ್ನು ಕೈಗೊಂಡಿದ್ದು, ಅವರ ಕಾರ್ಯವೈಖರಿಗೆ ವ್ಯಾಪಕ ಪ್ರಶಂಸೆ ಮತ್ತು ಮೆಚ್ಚುಗೆ ವ್ಯಕ್ತವಾಗಿದೆ.