ಬೆಂಗಳೂರು, ಜೂ. 10 (DaijiworldNews/AK): ಭಾರತವು ಇದೀಗ ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಅವರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರದ 11 ವರ್ಷಗಳ ಸಾಧನೆ ಸಂಬಂಧ ಇಂದು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಟ್ರಿಲಿಯನ್ ದೇಶವಾಗಲು ಸುಮಾರು 30-40 ವರ್ಷ ಬೇಕಾಯಿತು. 2 ಟ್ರಿಲಿಯನ್ ದೇಶವಾಗಲು ಸುಮಾರು 62-63 ವರ್ಷವೇ ಬೇಕಾಯಿತು. ಸ್ಥಿರತೆಯ ಪರಿಣಾಮವಾಗಿ 2 ಟ್ರಿಲಿಯನ್ನಿಂದ 4 ಟ್ರಿಲಿಯನ್ ಗೂ ಹೆಚ್ಚು ಸಾಧನೆ ಮಾಡಿದ್ದೇವೆ ಎಂದು ವಿವರಿಸಿದರು. ಸ್ಥಿರ ಸರಕಾರದ ಪರಿಣಾಮವಾಗಿ ಸಮರ್ಥ ಸರಕಾರ- ಆಡಳಿತ ನೀಡಲು ಸಾಧ್ಯವಾಗಿದೆ. ಸ್ಥಿರ ಸರಕಾರವು ಎಲ್ಲ ಕ್ಷೇತ್ರಗಳಲ್ಲಿ ಸಾಧನೆಗೆ ಕಾರಣವಾಗಿದೆ ಎಂದು ವಿಶ್ಲೇಷಿಸಿದರು.
ರಕ್ಷಣಾ ವ್ಯವಸ್ಥೆಯ ಸುಧಾರಣೆ
ರಕ್ಷಣಾ ವ್ಯವಸ್ಥೆಯ ಸುಧಾರಣೆಯೂ ಪ್ರಮುಖ ಸಂಗತಿ. ರಕ್ಷಣಾ ವಿಭಾಗದ ಮುಖ್ಯಸ್ಥರ ಹುದ್ದೆ (ಸಿಡಿಎಸ್) ಕುರಿತಂತೆ ನಿರ್ಧರಿಸಲಾಗದ ಸರಕಾರ ಹಿಂದೆ ನಮ್ಮಲ್ಲಿತ್ತು. ಗಡಿ ಭಾಗದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಮಾಡಿದರೆ ಅದನ್ನು ನಮ್ಮ ಶತ್ರು ದೇಶಗಳು ಬಳಸಿಕೊಳ್ಳುತ್ತವೆ ಎಂದು ಅಂತೋಣಿಯವರು ಸಂಸತ್ತಿನಲ್ಲೇ ಅಧಿಕೃತ ಹೇಳಿಕೆ ನೀಡಿದ್ದರು. ಗಡಿ ಭಾಗದ ಮೂಲಸೌಕರ್ಯದಿಂದ ಸಿಡಿಎಸ್ ವರೆಗೆ ಸಮರ್ಥ ನಿರ್ಧಾರ ಮಾಡಿದ್ದೇವೆ. ಸಿಡಿಎಸ್ ಪರಿಣಾಮವಾಗಿ ಆಪರೇಷನ್ ಸಿಂದೂರ, ಈ ಕಾರ್ಯಾಚರಣೆ ಬಳಿಕ ಪಾಕಿಸ್ತಾನದ ನಡವಳಿಕೆಗೆ ದಿಟ್ಟ ಉತ್ತರ ನೀಡಲು ಸಾಧ್ಯವಾಯಿತು ಎಂದು ಪ್ರಲ್ಹಾದ್ ಜೋಶಿ ಅವರು ಹೇಳಿದರು.
3 ರಕ್ಷಣಾ ದಳಗಳ ಸಮನ್ವಯತೆಯ ಮೂಲಕ ಭಯೋತ್ಪಾದನೆಗೆ ಸಂಬಂಧಿಸಿದ 9 ಸ್ಥಳಗಳನ್ನು ಗುರುತಿಸಿ ಅದೇ ಜಾಗಕ್ಕೆ ಕ್ಷಿಪಣಿ ದಾಳಿ ಮಾಡಲು ಸಾಧ್ಯವಾಗಿದೆ. ರಕ್ಷಣಾ ಕ್ಷೇತ್ರದ ಎಲ್ಲ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ನಾವು 5 ಸಾವಿರ ಉತ್ಪನ್ನಗಳನ್ನು ಮೇಡ್ ಇನ್ ಇಂಡಿಯ, ಮೇಕ್ ಇನ್ ಇಂಡಿಯದಲ್ಲಿ ಉತ್ಪಾದಿಸುತ್ತಿದ್ದೇವೆ. 25 ಸಾವಿರ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಮತ್ತಿತರ ಉತ್ಪನ್ನಗಳನ್ನು ರಫ್ತು ಮಾಡಿದ್ದು, ಈ ದೇಶದಲ್ಲಿ ಇದೇ ಮೊದಲು ಎಂದು ನುಡಿದರು.
ಕಡು ಬಡತನ ಪ್ರಮಾಣವು ಶೇ 21ರಿಂದ ಶೇ 5ಕ್ಕೆ ಇಳಿದಿದೆ. 26 ಕೋಟಿ ಜನರು ಕಡು ಬಡತನ ರೇಖೆಯಿಂದ ಹೊರಕ್ಕೆ ಬಂದಿದ್ದಾರೆ. ಇದು ಭಾರತದ ಏಜೆನ್ಸಿಗಳ ಅಂಕಿ ಅಂಶವಲ್ಲ; ಇದು ವಿಶ್ವ ಬ್ಯಾಂಕಿನ ಅಂಕಿ ಅಂಶಗಳು ಎಂದು ಸ್ಪಷ್ಟಪಡಿಸಿದರು. ಸಮರ್ಥ ನಾಯಕತ್ವ, ಸ್ಥಿರ ಸರಕಾರದ ಪರಿಣಾಮವಾಗಿ ದೇಶದ ರಕ್ಷಣಾ ವ್ಯವಸ್ಥೆ ಬಗ್ಗೆ ಕೂಡ ನಿರ್ದಿಷ್ಟ- ದಿಟ್ಟ ಹೆಜ್ಜೆ ಇಟ್ಟಿದ್ದೇವೆ ಎಂದು ವಿವರ ನೀಡಿದರು. ಇದಕ್ಕೆ ಇತ್ತೀಚಿನ ಆಪರೇಷನ್ ಸಿಂದೂರ ಒಂದು ಉದಾಹರಣೆ ಎಂದು ತಿಳಿಸಿದರು.