ಬೆಂಗಳೂರು,ಜೂ. 04 (DaijiworldNews/AK): ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಇಂದಿರಾ ಗಾಂಧಿಯವರು 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ಕರ್ನಾಟಕದಲ್ಲಿ ಘೋಷಿತವಲ್ಲದ ತುರ್ತು ಪರಿಸ್ಥಿತಿ ಈಗ ಇದೆ ಎಂದು ವಿಧಾನಪರಿಷತ್ತಿನ ಸದಸ್ಯ ಸಿ.ಟಿ.ರವಿ ಅವರು ಟೀಕಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ರಾಜ್ಯ ಮಾಡಲು ಹೊರಟಿದ್ದೀರಾ ನೀವು? ಪೊಲೀಸ್ ಠಾಣೆಗಳನ್ನು ಕಾಂಗ್ರೆಸ್ ಸರಕಾರದ ಮರ್ಜಿಗೆ ತಕ್ಕಂತೆ ಬಳಸುವ ಪರಿಸ್ಥಿತಿ ತುರ್ತು ಪರಿಸ್ಥಿತಿ ಕಾಲದಲ್ಲೂ ಇತ್ತು. ಈಗಲೂ ಅದೇ ಕೆಲಸ ಮಾಡುತ್ತಿದ್ದೀರಿ. ರಾಜಕೀಯಪ್ರೇರಿತ ವರ್ತನೆ ಎದ್ದು ಕಾಣುತ್ತದೆ ಎಂದು ಆಕ್ಷೇಪಿಸಿದರು.
ವಿಧಾನಪರಿಷತ್ತಿನಲ್ಲಿ ನಡೆದ ಘಟನೆ, ಸಭಾಪತಿಗಳು ರೂಲಿಂಗ್ ಕೊಟ್ಟ ಬಳಿಕ ನನ್ನ ಮೇಲೆ ಕೇಸ್ ದಾಖಲಿಸಿ ನನ್ನನ್ನು ಬಂಧಿಸಿದ್ದರು. ನಾನು ಕೊಟ್ಟ ದೂರು ದಾಖಲಾಗಿಯೇ ಇಲ್ಲ. ಸಭಾಪತಿಗಳು, ವಿಧಾನಸೌಧದ ಕಾರಿಡಾರ್ನಲ್ಲಿ ನಡೆದ ಹಲ್ಲೆಗೆ ಸಂಬಂಧಿಸಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದರೂ ಇವತ್ತಿನವರೆಗೆ ಅಪರಾಧಿಗಳನ್ನು ಬಂಧಿಸಿಲ್ಲ ಎಂದು ದೂರಿದರು.
ದಲಿತ ಸಮಾಜಕ್ಕೆ ಸೇರಿದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಯವರನ್ನು 4ರಿಂರ 5 ಗಂಟೆ ಕಾಲ ದಿಗ್ಬಂಧನದಲ್ಲಿ ಇಡಲಾಗಿತ್ತು. ಆದರೆ, ದಿಗ್ಬಂಧನದಲ್ಲಿ ಇಟ್ಟವರನ್ನು ಇನ್ನೂ ಬಂಧಿಸಿಲ್ಲ ಎಂದು ಆಕ್ಷೇಪಿಸಿದರು. ರವಿಕುಮಾರ್ ಅವರು ವಿಷಾದ ವ್ಯಕ್ತಪಡಿಸಿದ ನಂತರ ಐದೈದು ಗಂಟೆ ವಿಚಾರಣೆಗೆಂದು ಠಾಣೆಯಲ್ಲಿ ಕೂರಿಸಿದ್ದರು ಎಂದು ಟೀಕಿಸಿದರು.
ಟಾರ್ಗೆಟ್ ಮಾಡುವ ಕೆಲಸ ನಡೆಯುತ್ತಿದೆ
ರಿಪಬ್ಲಿಕ್ ಆಫ್ ದಕ್ಷಿಣ ಕನ್ನಡಕ್ಕೆ ಸಭಾಧ್ಯಕ್ಷರು ಓವರ್ ರೈಡ್ ಮಾಡುತ್ತಾರೆ. ಸರಣಿ ಹತ್ಯೆ ನಿಂತಿಲ್ಲ. ಕ್ರಮ ಮಾತ್ರ ಏಕಪಕ್ಷೀಯ. ಯಾಕೆಂದರೆ, ಕೆಪಿಸಿಸಿ ಅಧ್ಯಕ್ಷರೇ ಕುಕ್ಕರ್ ಬಾಂಬ್ ಒಯ್ದವನನ್ನು ನಮ್ಮ ಬ್ರದರ್ಸ್ ಎಂದು ಸರ್ಟಿಫಿಕೇಟ್ ಕೊಟ್ಟರು. ಜನರ ನಡುವೆ ಇದ್ದು ಜನಪರ ಹೋರಾಟ ಮಾಡುವ ಅರುಣ್ಕುಮಾರ್ ಪುತ್ತಿಲರ ಮೇಲೆ ಗಡೀಪಾರು ನೋಟಿಸ್ ಕ್ರಮ ಆಗುತ್ತಿದೆ. ಹೀಗೆ ಟಾರ್ಗೆಟ್ ಮಾಡುವ ಕೆಲಸ ನಡೆಯುತ್ತಿದೆ ಎಂದು ಆಕ್ಷೇಪಿಸಿದರು.