ಕಲಬುರ್ಗಿ,ಮೇ. 24 (DaijiworldNews/AK): ಪ್ರಿಯಾಂಕ್ ಖರ್ಗೆಯವರೇ, ಅಧಿಕಾರ ಶಾಶ್ವತವಲ್ಲ; ನಿಮ್ಮ ಅಧಿಕಾರದ ದರ್ಪ, ಅಹಂಕಾರ, ಅಧಿಕಾರದ ಸೊಕ್ಕನ್ನು ಅಡಗಿಸುವ ಶಕ್ತಿ ಬಿಜೆಪಿ ಕಾರ್ಯಕರ್ತರಿಗೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಎಚ್ಚರಿಸಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ದೌರ್ಜನ್ಯ, ಗೂಂಡಾಗಿರಿ ಮತ್ತು ಸಂವಿಧಾನ ವಿರೋಧಿ ನಡೆಯನ್ನು ವಿರೋಧಿಸಿ ಇಂದು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ವೃತ್ತದ ಬಳಿ ಬಿಜೆಪಿ ಹಮ್ಮಿಕೊಂಡಿದ್ದ “ಕಲಬುರ್ಗಿ ಚಲೋ” ಬೃಹತ್ ಹೋರಾಟ ಸಮಾವೇಶದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಸರಕಾರ ಬಂದ ಬಳಿಕ ಗುಲ್ಬರ್ಗ ಜಿಲ್ಲೆಯಲ್ಲಿ ಪಾಳೇಗಾರಿಕೆ ನಡೆಯುತ್ತಿದೆ. ಈ ಭಾಗದಲ್ಲಿ 18-20 ಜನರ ಹತ್ಯೆ ಆಗಿದೆ. ಅಧಿಕಾರಿಗಳೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗಮನ ಸೆಳೆದರು. ಈ ಭಾಗದ ಮತದಾರರು ಮುಂದಿನ ದಿನಗಳಲ್ಲಿ ಇದೆಲ್ಲದಕ್ಕೂ ಉತ್ತರ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರ ಬೆಂಬಲಿಗರು, ರಾಜಕೀಯ ಪುಡಾರಿಗಳು ಮೊನ್ನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ದಿಗ್ಬಂಧನ ಹಾಕಿದ್ದಾರೆ ಎಂದು ಟೀಕಿಸಿದರು.
ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಗುಲ್ಬರ್ಗ ಜಿಲ್ಲಾ ಪ್ರವಾಸ ಮಾಡಿದ್ದಾಗ ಪತ್ರಿಕಾಗೋಷ್ಠಿಯಲ್ಲಿ ಕೆಲವು ಮಾತನಾಡಿದ್ದಾರೆ ಎಂಬ ವಿಷಯ ಮುಂದಿಟ್ಟು ಚಿತ್ತಾಪುರದ ಅತಿಥಿಗೃಹಕ್ಕೆ ಬೀಗ ಹಾಕಿ ಛಲವಾದಿಯವರಿಗೆ ದಿಗ್ಬಂಧನ ಹಾಕಿದ್ದಾರೆ ಎಂದು ಆಕ್ಷೇಪಿಸಿದರು.
ಆ ದಿನದ ಘಟನೆ ನೋಡಿದಾಗ ನನಗೆ ಪ್ರಿಯಾಂಕ್ ಖರ್ಗೆ ಬಗ್ಗೆ ಕೋಪ ಬರಲಿಲ್ಲ; ಅದರ ಬದಲಾಗಿ ಪ್ರಿಯಾಂಕ್ ಬಗ್ಗೆ ಮರುಕ ಹುಟ್ಟಿತು. ರಾಜ್ಯ- ದೇಶವನ್ನು ಸುದೀರ್ಘವಾಗಿ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದವರು ಗುಲ್ಬರ್ಗ ಜಿಲ್ಲೆಯನ್ನು 50 ವರ್ಷಕ್ಕೂ ಹೆಚ್ಚು ಕಾಲ ಆಡಳಿತ ಮಾಡಿದ ಮಲ್ಲಿಕಾರ್ಜುನ ಖರ್ಗೆಯವರ ಸುಪುತ್ರ ಪ್ರಿಯಾಂಕ್ ಖರ್ಗೆಯವರು, ಇಂಥ ಕೀಳು ಮಟ್ಟಕ್ಕೆ ಇಳಿದರಲ್ಲವೇ ಎಂದು ಮರುಕ ಹುಟ್ಟಿದೆ ಎಂದು ವಿಶ್ಲೇಷಿಸಿದರು.
ಎಸ್ಸೆಸ್ಸೆಲ್ಸಿ- ಮೊದಲ ಸ್ಥಾನಕ್ಕೆ ತಂದಿದ್ದರೆ.ಶಾಸಕರಾಗಿ, ಸಚಿವರಾಗಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಾಡಿದ್ದರೆ ಪ್ರಿಯಾಂಕ್ ಖರ್ಗೆಯವರನ್ನು ನಾನು ಮೆಚ್ಚಿಕೊಳ್ಳುತ್ತಿದ್ದೆ. ಈ ಭಾಗದ ಜನರೂ ಮೆಚ್ಚಿಕೊಳ್ಳುತ್ತಿದ್ದರು. ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಘೋಷಣೆ ಆದಾಗ ಗುಲ್ಬರ್ಗ ಜಿಲ್ಲೆಗೆ ಕೊನೆಯ ಸ್ಥಾನ ಲಭಿಸಿತ್ತು. ಕಲಬುರ್ಗಿಯನ್ನು ಮೊದಲ ಸ್ಥಾನಕ್ಕೆ ತಂದಿದ್ದರೆ ಪ್ರಿಯಾಂಕ್ ಖರ್ಗೆಯವರ ಸುದೀರ್ಘ ಆಡಳಿತವನ್ನು, ತಾಕತ್ತನ್ನು ಮೆಚ್ಚಿಕೊಳ್ಳುತ್ತಿದ್ದೆ ಎಂದು ನುಡಿದರು.