ಅಮರಾವತಿ, ಮೇ. 19 (DaijiworldNews/AA): ಕಾರಿನಲ್ಲೇ ನಾಲ್ವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ದ್ವಾರಪುಡಿ ಗ್ರಾಮದಲ್ಲಿ ಸಂಭವಿಸಿದೆ.

ದ್ವಾರಪುಡಿ ಗ್ರಾಮದ ಮಂಗಿ ಉದಯ್ (8), ಬುರ್ಲೆ ಚಾರುಮತಿ (8), ಬುರ್ಲೆ ಚರಿಷ್ಮಾ (6) ಮತ್ತು ಕಂಡಿ ಮನಸ್ವಿನಿ (6) ಮೃತ ಮಕ್ಕಳು.
ಭಾನುವಾರ ದ್ವಾರಪುಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಕಾರು ನಿಲ್ಲಿಸಿ, ಲಾಕ್ ಮಾಡುವುದನ್ನ ಮರೆತು ಹೋಗಿದ್ದರು. ಈ ವೇಳೆ ಅಲ್ಲೇ ಆಟವಾಡುತ್ತಿದ್ದ ನಾಲ್ವರು ಮಕ್ಕಳು ಮಳೆಯಿಂದ ತಪ್ಪಿಸಿಕೊಳ್ಳಲು ಪಕ್ಕದಲ್ಲೇ ನಿಲ್ಲಿಸಿದ್ದ ಕಾರನ್ನು ಹತ್ತಿದ್ದಾರೆ. ದುರಾದೃಷ್ಟವಶಾತ್, ಕಾರಿನ ಬಾಗಿಲು ಆಕಸ್ಮಿಕವಾಗಿ ಲಾಕ್ ಆಗಿ, ನಾಲ್ವರು ಮಕ್ಕಳು ಕಾರಿನಲ್ಲೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಮಕ್ಕಳಿಗಾಗಿ ಮನೆಯವರು ಸುಮಾರು 3 ಗಂಟೆಗಳ ಕಾಲ ಹುಡುಕಾಟ ನಡೆಸಿದ್ದರು. ಕೊನೆಗೆ ಅಲ್ಲೇ ನಿಲ್ಲಿಸಿದ್ದ ಕಾರನ್ನು ಗಮನಿಸಿದಾಗ ಮಕ್ಕಳು ಕಾರಿನೊಳಗೆ ಸಿಲುಕಿರುವುದು ಪತ್ತೆಯಾಗಿದೆ. ಕೂಡಲೇ ಕಾರಿನ ಗ್ಲಾಸ್ ಒಡೆದು ಮನೆಯವರು ಮಕ್ಕಳನ್ನು ಹೊರೆತೆಗೆದರು. ಅಷ್ಟರಲ್ಲಾಗಲೇ ನಾಲ್ವರು ಮಕ್ಕಳು ಉಸಿರುಗಟ್ಟಿ ಕೊನೆಯುಸಿರೆಳೆದಿದ್ದರು.