ಹೈದರಾಬಾದ್ , ,ಏ.08 (DaijiworldNews/AK): ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಪಲಾಸಾ ಬಳಿ ಅವಘಡ ನಡೆದಿದೆ. ವಿಶಾಖಪಟ್ಟಣಂ ಮಾರ್ಗವಾಗಿ ಪಶ್ಚಿಮ ಬಂಗಾಳದ ಶಾಲಿಮಾರ್ಗೆ ಪ್ರಯಾಣಿಸುತ್ತಿದ್ದ ಫಲಕ್ನುಮಾ ಎಕ್ಸ್ಪ್ರೆಸ್ ರೈಲು ಅನಿರೀಕ್ಷಿತವಾಗಿ ಎರಡು ಭಾಗವಾಗಿ ಬೇರ್ಪಟ್ಟಿದೆ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸದೇ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ರೈಲ್ವೆ ಅಧಿಕಾರಿಗಳು ರೈಲಿನಲ್ಲಿ ಯಾವುದೇ ಅಲರ್ಟ್ ತಿಳಿಯದೇ ಏಕಾಏಕಿ ಎರಡು ಎಸಿ ಬೋಗಿಗಳು ಬೇರ್ಪಟ್ಟಿವೆ. ಕೂಡಲೇ ಎಚ್ಚೆತ್ತ ಚಾಲಕ ತಕ್ಷಣ ರೈಲನ್ನು ನಿಲ್ಲಿಸಿ, ದೊಡ್ಡ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಲಿ, ಸಾವು-ನೋವಿಗಳಾಗಲಿ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ರೈಲ್ವೇ ಸಿಬ್ಬಂದಿ ಘಟನಾ ಸ್ಥಳಕ್ಕೆ ತ್ವರಿತವಾಗಿ ಭೇಟಿ ನೀಡಿದ್ದಾರೆ. ಅಗತ್ಯ ರಿಪೇರಿ ಮಾಡಿ ಬೇರ್ಪಟ್ಟ ಬೋಗಿಗಳನ್ನು ಮತ್ತೆ ಜೋಡಿಸಿದ್ದಾರೆ. ಸುರಕ್ಷತೆಯ ಎಲ್ಲಾ ಪ್ರೋಟೋಕಾಲ್ (ಶಿಷ್ಟಾಚಾರ) ಪಾಲಿಸಿದ್ದು, ಯಾವುದೇ ಸಮಸ್ಯೆಗಳಿಲ್ಲ ಎಂದು ಖಚಿತಪಡಿಸಿಕೊಂಡ ಬಳಿಕ ರೈಲು ತನ್ನ ಪ್ರಯಾಣವನ್ನು ಪುನರಾರಂಭಿಸಿದೆ.