ಉಡುಪಿ, ಮೇ 23 (DaijiworldNews/MS): ‘ಬಿಜೆಪಿ ಅಭ್ಯರ್ಥಿಯ ವಿರುದ್ಧ ಬಂಡಾಯ ಸಾರಿರುವ ಮಾಜಿ ಶಾಸಕರಾದ ರಘುಪತಿ ಭಟ್ ಅವರ ವಿರುದ್ದ ತಕ್ಷಣ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಬಿಜೆಪಿ ರಾಜ್ಯ ಸಮಿತಿಗೆ ಶಿಫಾರಸು ಮಾಡಿದ್ದೇವೆ’ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದ್ದಾರೆ.
![](https://daijiworld.ap-south-1.linodeobjects.com/Linode/images3/udbjp_230524_1.jpg)
ಇಂದು ಉಡುಪಿಯಲ್ಲಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು "ರಘುಪತಿ ಭಟ್ ಅವರು ಪಕ್ಷದಲ್ಲಿ ಮತ್ತು ರಾಜಕೀಯ ಜೀವನದಲ್ಲಿಯೂ ಎಲ್ಲಾ ಉನ್ನತ ಸ್ಥಾನಗಳನ್ನು ಅನುಭವಿಸಿದ್ದಾರೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದರು ಆದರೆ ಟಿಕೆಟ್ ನಿರಾಕರಿಸಲಾಯಿತು. ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ಅವರು ಬಿಜೆಪಿ ಕಾರ್ಯಕರ್ತರ ಅಭ್ಯರ್ಥಿ ಎಂದು ಬೆಂಬಿಸಿಕೊಳ್ಳುತ್ತಿದ್ದಾರೆ. ಅವರು ಎದುರಿಸುತ್ತಿರುವ ಸಮಸ್ಯೆಗಳಿಗೆ ಬಂಡಾಯ ಉತ್ತರವಲ್ಲ. ನಾವು ನಮ್ಮ ಶಿಫಾರಸುಗಳನ್ನು ರಾಜ್ಯ ಸಮಿತಿ ನೀಡಿದ್ದೇವೆ. ಟಿಕೆಟ್ ನಿರಾಕರಿಸಿದ ಬಳಿಕ ಅವರು ಪಕ್ಷದ ವಿರುದ್ದ ಸುಳ್ಳು ಸುದ್ದಿ ಹರಡುತ್ತಿದ್ದು ಮತದಾರರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಶಿಸ್ತು ಕ್ರಮವನ್ನು ರಾಜ್ಯ ಸಮಿತಿಯು ಕೆಲವೇ ದಿನಗಳಲ್ಲಿ ಜಾರಿಗೊಳಿಸಬಹುದು ಎಂದು ಅವರು ಹೇಳಿದ್ದಾರೆ.
ರಘುಪತಿ ಭಟ್ ಅವರೊಂದಿಗೆ ಕೆಲವು ಜಿಲ್ಲಾ ಸಮಿತಿ ಸದಸ್ಯರು ಕೈ ಜೋಡಿಸಿರುವ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿದ ಕಿಶೋರ್ ಕುಮಾರ್, ರಘುಪತಿ ಭಟ್ ಅವರ ಮೇಲೆ ಶಿಸ್ತು ಕ್ರಮ ಕೈಗೊಂಡ ನಂತರ ಜಿಲ್ಲಾ ಸಮಿತಿ ಸದಸ್ಯರ ಮೇಲೂ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.