ಮಂಗಳೂರು, ಫೆ.06 (DaijiworldNews/HR): "ಕಂಬಳ ಕರಾವಳಿಯ ಜನಪದ ಕ್ರೀಡೆ, ಆದರೆ ಕಂಬಳ ಬರೀ ಕ್ರೀಡೆಯಾಗಿ ಉಳಿಯಬಾರದು. ಅದು ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಉತ್ಸವ ಆಗಬೇಕು. ಮಂಗಳೂರಿಗೆ ಟೂರಿಸಂ ಆಕರ್ಷಿಸುವ ನೆಲೆಯಲ್ಲಿ ಕಂಬಳವನ್ನು ಉತ್ಸವದ ನೆಲೆಯಲ್ಲಿ ನಡೆಸಬೇಕು" ಎಂದು ಬಿಜೆಪಿ ರಾಜ್ಯ ವಕ್ತಾರ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
![](https://daijiworld.ap-south-1.linodeobjects.com/iWeb/tvdaijiworld/img_tv247/hr-060221-ganesh1.jpg)
![](https://daijiworld.ap-south-1.linodeobjects.com/iWeb/tvdaijiworld/img_tv247/hr-060221-ganesh2.jpg)
![](https://daijiworld.ap-south-1.linodeobjects.com/iWeb/tvdaijiworld/img_tv247/hr-060221-ganesh3.jpg)
![](https://daijiworld.ap-south-1.linodeobjects.com/iWeb/tvdaijiworld/img_tv247/hr-060221-ganesh4.jpg)
ನಗರದ ಪತ್ತುಮುಡಿ ಸೌಧದಲ್ಲಿ 4ನೇ ವರ್ಷದ ಮಂಗಳೂರು ಕಂಬಳದ ಪೂರ್ವಭಾವಿ ಸಭೆಯು ಸಮಿತಿ ಅಧ್ಯಕ್ಷರಾದ ಕ್ಯಾ.ಬೃಜೇಶ್ ಚೌಟ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಕಂಬಳದ ಕುರಿತು ಮಾತನಾಡಿದ ಕ್ಯಾ.ಕಾರ್ಣಿಕ್, "ಮಂಗಳೂರು ನಗರದಲ್ಲಿ ನಡೆಯುತ್ತಿರುವ ಏಕೈಕ ಕಂಬಳ ಇದಾಗಿದ್ದು, ನಗರ ವ್ಯಾಪ್ತಿಯ ಜನರ ಪಾಲಿಗೆ ಇದು ತುಳುವರ ಉತ್ಸವದ ರೀತಿ ನಡೆಯಬೇಕು. ಕಂಬಳದ ಜೊತೆಗೆ ತುಳುನಾಡಿನ ಸಂಸ್ಕೃತಿ, ಪರಂಪರೆ ಬಿಂಬಿಸುವ ಪ್ರದರ್ಶನಗಳು, ಸ್ಪರ್ಧೆಗಳನ್ನು ಹಮ್ಮಿಕೊಂಡರೆ ಎಲ್ಲ ರೀತಿಯ ವಯೋಮಾನದ ಜನರು ಭಾಗವಹಿಸಲು ಪ್ರೇರಣೆ ಸಿಗುತ್ತದೆ. ಜೊತೆಗೆ, ಕಂಬಳವೂ ಆಕರ್ಷಣೆ ಪಡೆಯುತ್ತದೆ. ಟೂರಿಸಂ ಆಕರ್ಷಿಸುವ ನೆಲೆಯಲ್ಲಿ ಇಂತಹ ಉತ್ಸವಗಳು ಆಯೋಜನೆ ಆಗಬೇಕು" ಎಂದರು.
ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಪಿ.ಆರ್. ಶೆಟ್ಟಿ ಪೊಯ್ಯೇಲು ಮಾತನಾಡಿ, "ಕಳೆದ ಬಾರಿ ಕಂಬಳಕ್ಕೆ ನಿಷೇಧದ ತೂಗುಗತ್ತಿ ಬಂದಾಗ ಜಿಲ್ಲೆಯ ರಾಜಕಾರಣಿಗಳು ಪಕ್ಷ ಭೇದ ಮರೆತು ಬೆಂಬಲ ನೀಡಿದ್ದರು. ಗಣೇಶ್ ಕಾರ್ಣಿಕ್, ಸದಾನಂದ ಗೌಡ ಸೇರಿದಂತೆ ಕಾಂಗ್ರೆಸ್, ಬಿಜೆಪಿ ಮುಖಂಡರು ಸಹಕಾರ ನೀಡಿದ್ದರು. ಈ ಬಾರಿಯೂ ಕೋವಿಡ್ ಕಾರಣದಿಂದ ಕಂಬಳ ಅಸಾಧ್ಯ ಎನ್ನುವಾಗ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಕಂಬಳ ನಡೆಯುವಂತಾಗಲು ಸಹಕಾರ ನೀಡಿದ್ದಾರೆ" ಎಂದು ಹೇಳಿದ್ದಾರೆ.
ಇನ್ನು ಸಭೆಯ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕ್ಯಾ. ಬೃಜೇಶ್ ಚೌಟ ಮಾತನಾಡಿ, "ಮಂಗಳೂರು ಕಂಬಳವನ್ನು ಸಿಗ್ನೇಚರ್ ಈವೆಂಟ್ ಆಗಿ ಪರಿವರ್ತಿಸಲು ಎಲ್ಲರ ಸಹಕಾರವೂ ಬೇಕು. ಮಂಗಳೂರಿನ ಯುವಕರೇ ಸೇರಿಕೊಂಡು ನಡೆಸುತ್ತಿರುವ ಈ ಕಂಬವನ್ನು ತುಳುವರ ಉತ್ಸವ ರೀತಿಯಾಗಿ ಪರಿವರ್ತಿಸಲು ಕಂಬಳ ಅಭಿಮಾನಿಗಳ ಜೊತೆಗೆ ಸರಕಾರ, ಸಾರ್ವಜನಿಕರು, ವಿವಿಧ ಸಂಘಟನೆಗಳ ಬೆಂಬಲ ಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಮಂಗಳೂರು ಕಂಬಳವನ್ನು ಸಾಂಸ್ಕೃತಿಕ ಉತ್ಸವದ ರೂಪದಲ್ಲಿ ನಡೆಸಲು ಚಿಂತನೆ ನಡೆಸುತ್ತೇವೆ ಎಂದು ಹೇಳಿದರು. ಅಲ್ಲದೆ, ಈ ಬಾರಿ ಕಂಬಳ ನಡೆಸಲು ಅನುಮತಿ ಮಾಡಿಕೊಟ್ಟ ಜಿಲ್ಲಾಧಿಕಾರಿ, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲೆಯ ಎಲ್ಲ ಶಾಸಕರನ್ನು ಅಭಿನಂದಿಸುವುತ್ತೇನೆ" ಎಂದರು.
ಸಭೆಯಲ್ಲಿ ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಕಂಗಿನಮನೆ, ಭಾರತ ಸರಕಾರದ ಸಾಮಾಜಿಕ ಹಕ್ಕು ಸಚಿವಾಲಯದ ಸದಸ್ಯರಾದ ಭಾಸ್ಕರದಾಸ್ ಎಕ್ಕಾರು, ಕರ್ನಾಟಕ ಕ್ರೈಸ್ತ ನಿಗಮದ ಅಧ್ಯಕ್ಷರಾದ ಜೋಯಲ್ ಡಿಸೋಜ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ರಾಧಾಕೃಷ್ಣ , ಕಿರಣ್ ಕುಮಾರ್ ಕೋಡಿಕಲ್, ಸಂದೀಪ್ ಗರೋಡಿ, ಭರತ್ ಕುಮಾರ್, ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ನಂದನ್ ಮಲ್ಯ, ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್, ಸಂಚಾಲಕ ಸಚಿನ್ ಶೆಟ್ಟಿ, ಖಜಾಂಚಿ ಪ್ರೀತಮ್ ರೈ, ಸಮಿತಿ ಸದಸ್ಯರು ಉಪಸ್ಥಿತರಿದ್ದರು.