ಮಂಗಳೂರು, ಸೆ.13 (DaijiworldNews/AA): ಹೆಚ್ಚುತ್ತಿರುವ ತಾಪಮಾನ ಹಾಗೂ ತೀವ್ರ ಮಳೆ ಕೊರತೆಯ ಪರಿಣಾಮ ಕರ್ನಾಟಕದಲ್ಲಿ ವಿದ್ಯುತ್ ಬೇಡಿಕೆ ಗಣನೀಯವಾಗಿ ಏರಿಕೆಯಾಗಿದ್ದು, ವಿದ್ಯುತ್ ಕೊರತೆಯ ನಡುವೆ ರಾಜ್ಯದ ಹಲವು ಭಾಗಗಳಲ್ಲಿ ಅಘೋಷಿತ ಲೋಡ್ ಶೆಡ್ಡಿಂಗ್ ಎದುರಾಗಿದೆ. ರಾಜ್ಯದ ದೈನಂದಿನ ವಿದ್ಯುತ್ ಬೇಡಿಕೆ 19,140 ಮೆಗಾವ್ಯಾಟ್ ತಲುಪಿದ್ದರೆ, ಒಟ್ಟು ವಿದ್ಯುತ್ ಉತ್ಪಾದನೆ 18,889 ಮೆಗಾವ್ಯಾಟ್ ಇದೆ.


ಇದರಿಂದ ರಾಜ್ಯದಲ್ಲಿ ಪ್ರತಿದಿನ ಸುಮಾರು 251 ಮೆಗಾವ್ಯಾಟ್ ವಿದ್ಯುತ್ ಕೊರತೆ ಉಂಟಾಗಿದೆ. ಮಳೆ ಕೊರತೆ ಹಾಗೂ ಹವಾಮಾನ ಬಿಸಿಯಾಗಿರುವುದರಿಂದ ಏರ್ಕಂಡೀಷನರ್ಗಳು ಮತ್ತು ಕೂಲರ್ಗಳ ಬಳಕೆ ಹೆಚ್ಚಾಗಿರುವುದು ವಿದ್ಯುತ್ ಬಳಕೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ರಾಯಚೂರು, ಬಳ್ಳಾರಿ ಹಾಗೂ ಯಲ್ಲಾಪುರ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿನ ಜನರೇಟರ್ಗಳಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡಿರುವುದು ಮತ್ತು ಕೇಂದ್ರ ವಿದ್ಯುತ್ ಉತ್ಪಾದನಾ ಕೇಂದ್ರಗಳಿಂದ ಪೂರೈಕೆ ಕಡಿಮೆಯಾಗಿರುವುದು ವಿದ್ಯುತ್ ಕೊರತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಸದ್ಯ ಉಂಟಾಗಿರುವ ವಿದ್ಯುತ್ ವ್ಯತ್ಯಯ ತಾತ್ಕಾಲಿಕವಾಗಿದ್ದು, ಪರಿಸ್ಥಿತಿಯನ್ನು ನಿರ್ವಹಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಗರಿಷ್ಠ ವಿದ್ಯುತ್ ಬಳಕೆಯ ಅವಧಿಯಾದ ಬೆಳಗ್ಗೆ 6ರಿಂದ 8 ಗಂಟೆ ಹಾಗೂ ಸಂಜೆ 6ರಿಂದ ರಾತ್ರಿ 9 ಗಂಟೆ ನಡುವೆ ಪೂರೈಕೆ ಮತ್ತು ಬೇಡಿಕೆಯನ್ನು ಸಮತೋಲನಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಇದಲ್ಲದೆ, ಈ ಹಿಂದೆ ಮಾಡಿಕೊಂಡಿರುವ ಒಪ್ಪಂದದಂತೆ ಮುಂಗಾರು ಅವಧಿಯಲ್ಲಿ ಕರ್ನಾಟಕವು ಹರಿಯಾಣ ಮತ್ತು ಉತ್ತರ ಪ್ರದೇಶಗಳಿಗೆ ವಿದ್ಯುತ್ ಹಿಂತಿರುಗಿಸಬೇಕಾಗಿದೆ. ಬೇಸಿಗೆಯಲ್ಲಿ ಈ ರಾಜ್ಯಗಳಿಂದ ಪಡೆದಿದ್ದ ವಿದ್ಯುತ್ ಅನ್ನು ಇದೀಗ ಹಿಂತಿರುಗಿಸಬೇಕಿರುವುದು ಪ್ರಸ್ತುತ ವಿದ್ಯುತ್ ವ್ಯವಸ್ಥೆಯ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ. ಮುಂದಿನ ಬೇಸಿಗೆಯಲ್ಲಿ ತೀವ್ರ ನೀರಿನ ಕೊರತೆ ಉಂಟಾಗದಂತೆ ಜಲಾಶಯಗಳಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕಿರುವುದೂ ಪರಿಸ್ಥಿತಿಗೆ ಮತ್ತೊಂದು ಸವಾಲಾಗಿದೆ.
ಸೆ. 15ರಂದು ಮಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ
ಮಂಗಳೂರಿನಲ್ಲಿ ಸೆಪ್ಟೆಂಬರ್ 15ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ. ಎಕ್ಕೂರು ನ್ಯೂ, ಗೋರಿಗುಡ್ಡ, ನಾಗುರಿ ಹಾಗೂ ಪಂಪ್ವೆಲ್ ಫೀಡರ್ಗಳಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ವ್ಯತ್ಯಯಗೊಳ್ಳುವ ಪ್ರದೇಶಗಳು
ಸ್ನೇಹಾ ಸ್ಕೂಲ್, ಗೋರಿಗುಡ್ಡ, ಎಕ್ಕೂರು ಜಂಕ್ಷನ್, ಗುರುಪ್ರಸಾದ್ ಲೇನ್, ಉಜ್ಜೋಡಿ, ನಾರ್ದರ್ನ್ ಸ್ಕೈ, ಪಂಪ್ವೆಲ್, ಮಾರುತಿ ಗ್ಯಾರೇಜ್, ರಿಲಯನ್ಸ್, ನೆಕ್ಕರೆಮಾರ್, ವಿಶ್ವಾಸ್ ಭವನ, ಗೋಲ್ಡ್ ಪ್ಯಾಲೇಸ್, ಕೇಂದ್ರೀಯ ವಿದ್ಯಾಲಯ, ಮರೋಳಿ, ಪಡೀಲ್, ಅಳಪೆ, ಮೇಘನಗರ, ನಾಗುರಿ, ಗರೋಡಿ, ನೇತ್ರಾವತಿ ಲೇಔಟ್, ಕ್ಯಾಪಿಟಾನಿಯೊ, ರೆಡ್ ಬಿಲ್ಡಿಂಗ್, ರೈಲ್ವೆ ಸ್ಟೇಷನ್, ಸಿಎಡಿ ಸೆಂಟರ್, ಇಂಡಿಯನ್ ಹಾಸ್ಪಿಟಲ್, ನಿಟ್ಟೆ ಎಜುಕೇಶನ್, ಮಹಾವೀರ್ ಸರ್ಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ.