ಮಂಗಳೂರು, ಆ. 31 (DaijiworldNews/AA): ಸಾಕು ನಾಯಿಯನ್ನು ಭೇಟೆಯಾಡಿ ಎಡಪದವಿನ ನಲ್ಯ ಸೀತಾಂಬೆಟ್ಟು ಪ್ರದೇಶದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಭಾನುವಾರ ಸಿಕ್ಕಿಬಿದ್ದಿದೆ.

ಕಳೆದ ಕೆಲವು ದಿನಗಳಿಂದ ಸೀತಾಂಬೆಟ್ಟು ಸೇರಿದಂತೆ ಎಡಪದವಿನ ವಿವಿಧ ಪ್ರದೇಶಗಳಲ್ಲಿ ಚಿರತೆ ಓಡಾಟ ಕಂಡುಬಂದಿತ್ತು. ಚಿರತೆಯು ನಾಯಿಗಳು ಹಾಗೂ ಜಾನುವಾರುಗಳನ್ನು ಭೇಟೆಯಾಡುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆಗೆ ದೂರು ನೀಡಿದ್ದರು.
ಶನಿವಾರ ರಾತ್ರಿ ಸೀತಾಂಬೆಟ್ಟಿನ ಲೋಕೇಶ್ ಅವರಿಗೆ ಸೇರಿದ ಸಾಕು ನಾಯಿಯನ್ನು ಚಿರತೆ ಭೇಟೆಯಾಡಿ ಕೊಂದು ಹಾಕಿತ್ತು. ಈ ಘಟನೆ ಬಳಿಕ ಅರಣ್ಯ ಇಲಾಖೆಗೆ ದೂರು ನೀಡಲಾಗಿತ್ತು.
ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯ ಓಡಾಟ ಕಂಡುಬಂದಿದ್ದ ಸಮೀಪದ ಪ್ರದೇಶದಲ್ಲಿ ಬೋನನ್ನು ಇರಿಸಿದ್ದರು. ಭಾನುವಾರ ಚಿರತೆ ಬೋನಿಗೆ ಸಿಕ್ಕಿಬಿದ್ದಿದ್ದು, ಇದರಿಂದ ಸ್ಥಳೀಯರಲ್ಲಿ ಹಲವು ದಿನಗಳಿಂದ ಮನೆ ಮಾಡಿದ್ದ ಆತಂಕ ದೂರವಾಗಿದೆ.