ಬೆಳ್ತಂಗಡಿ, ಆ. 30 (DaijiworldNews/AA): 14 ವರ್ಷದ ಬಾಲಕನೋರ್ವ ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಬೈಪಾಡಿ ಸಮೀಪದ ಕುರಿಯಾಳದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

ಮೃತ ಬಾಲಕನನ್ನು ಭರತ್ ಗೌಡ ಅವರ ಪುತ್ರ ಶ್ರವಣ್ ಬಿ.ಕೆ. ಎಂದು ಗುರುತಿಸಲಾಗಿದೆ. ಈತ ಸ್ಥಳೀಯ ಹಳೆಕೋಟೆಯ ವಾಣಿ ಹೈಸ್ಕೂಲ್ನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು.
ಬಾಲಕ ಶನಿವಾರ ಸಂಜೆ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ. ಆದರೆ, ಮರುದಿನ ಬೆಳಗ್ಗೆಯೇ ಮನೆಯ ಮೇಲ್ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಬಾಲಕ ತಂದೆ, ತಾಯಿ, ಓರ್ವ ಸಹೋದರಿ ಹಾಗೂ ಇತರ ಬಂಧುಗಳನ್ನು ಅಗಲಿದ್ದಾನೆ.
ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.