ಉಡುಪಿ, ಆ. 17 (DaijiworldNews/TA): ಮೀನುಗಾರಿಕೆ ವೇಳೆ ಮೀನುಗಾರರೊಬ್ಬ ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ಮಲ್ಪೆಯಲ್ಲಿ ನಡೆದಿದೆ. ಮೃತರನ್ನು ಭದ್ರಾವತಿ ಬೆಳ್ಳಿಗೇರಿ ಗ್ರಾಮದ ಸುನಿತಮ್ಮ ಎಂಬವರ ಮಗ ಸಂಜೀವ(33) ಎಂದು ಗುರುತಿಸಲಾಗಿದೆ.

ಮಲ್ಪೆ ಬಂದರಿನಲ್ಲಿ ರಜತ ಎಂಬ ಹೆಸರಿನ ಮೀನುಗಾರಿಕೆ ಬೋಟಿನಲ್ಲಿ ಕೆಲಸ ಮಾಡಿಕೊಂಡಿದ್ದ ಇವರು, ಆ.10 ರಂದು ರಾತ್ರಿ ಮೀನುಗಾರಿಕೆಗಾಗಿ ಇತರ ಮೀನುಗಾರರೊಂದಿಗೆ ಸಮುದ್ರಕ್ಕೆ ತೆರಳಿದ್ದರು. ಆ.14ರಂದು ಮಧ್ಯಾಹ್ನ 1:30ರ ಸುಮಾರಿಗೆ ಮೀನುಗಾರಿಕೆಗೆ ಬಿಟ್ಟ ಬಲೆಯನ್ನು ಮೇಲಕ್ಕೆ ಎಳೆಯುತ್ತಿರುವಾಗ ಒಮ್ಮೆಲೇ ಬಂದ ಅಬ್ಬರದ ಅಲೆಗೆ ಬೋಟು ಅಲುಗಾಡಿತ್ತೆನ್ನಲಾಗಿದೆ.
ಇದರ ಪರಿಣಾಮ ಸಂಜೀವ ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆಯಾದರು. ಬಳಿಕ ಹುಡುಕಾಟ ನಡೆಸಿದಾಗ ಸಂಜೆ 6:30ರ ಸುಮಾರಿಗೆ ಅಲ್ಲೇ ಸಮೀಪ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.