ಮಂಗಳೂರು, ಜು. 05 (DaijiworldNews/TA): ಸೂಟರ್ ಪೇಟೆ ಗ್ರಾಮ ಲೆಕ್ಕಾಧಿಕಾರಿ ಕಚೇರಿಯ ಬಳಿ ಹಿರಿಯ ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರವನ್ನು ಎಳೆದು ಪರಾರಿಯಾಗಿರುವ ಪ್ರಕರಣದಲ್ಲಿ ಬಂಧಿತ ಆರೋಪಿಗಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಕರಣದಲ್ಲಿ ಉತ್ತರ ಪ್ರದೇಶದ ಮುಝಾಫರ್ ನಗರದ ರವಿ ಬೌರಾ (39) ಮತ್ತು ಗೊಂಡಾ ಜಿಲ್ಲೆ ಕನೀಲ್ ಗಂಝ್, ಶಿಶಾಮೌ ಗ್ರಾಮದ ಮೊಹಮ್ಮದ್ ಸಾಹೀಲ್ ಅಲಿಯಾಸ್ ಸಿದ್ದಿಕಿ (26) ಎಂಬಿಬ್ಬರನ್ನು ಬಂಧಿಸಿ, ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಪ್ರಕರಣ ನಡೆದ ಒಂದು ವಾರದ ಬಳಿಕ ಆರೋಪಿಗಳು ಸ್ಟೇಟ್ ಬ್ಯಾಂಕ್ ನ ರೊಸಾರಿಯೋ ಬಳಿ ಪೊಲೀಸರ ಬಲೆಗೆ ಬಿದ್ದಿದ್ದರು. ಪಾಂಡೇಶ್ವರ ಠಾಣೆ ಪೊಲೀಸರಿಂದ ಆರೋಪಿಗಳ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಇನ್ನು ಪೊಲೀಸರ ಕೈಯಿಂದ ತಪ್ಪಿಸಿಕೊಂಡಿರುವ ಆರೋಪಿ ಬಾಗಲಕೋಟೆಯ ಅಲ್ತಾಫ್ ಹುಸೈನ್ (40)ನ ಪತ್ತೆಗೆ ತಂಡ ರಚಿಸಿ, ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ ಆತನ ಸುಳಿವು ಇನ್ನೂ ಸಿಕ್ಕಿಲ್ಲ. ಆತನ ಊರಾದ ಬಾಗಲಕೋಟೆಗೆ ಪೊಲೀಸರ ಒಂದು ತಂಡ ಭೇಟಿ ನೀಡಿ ಹುಡುಕಾಟದ ಜತೆಗೆ ಮಾಹಿತಿ ಸಂಗ್ರಹಿಸಿದೆ.