ಮಂಗಳೂರು, ಜು. 01 (DaijiworldNews/AA): ನಾಗುರಿ ದುರಂತದಲ್ಲಿ ಗಾಯಗೊಂಡವರಿಗೆ ಜಿಲ್ಲಾಡಳಿತ ವತಿಯಿಂದ ವೈದ್ಯಕೀಯ ಚಿಕಿತ್ಸೆ ನೀಡುತ್ತೇವೆ. ಮೃತಪಟ್ಟವರ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ ನೀಡಲಾಗುವುದು ಎಂದು ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ.


ಕಂಕನಾಡಿ ನಾಗುರಿಯಲ್ಲಿ ಗುಡ್ಡ ಕುಸಿದು ಮೂವರು ಸಾವನ್ನಪ್ಪಿದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಪ್ರಕೃತಿ ವಿಕೋಪ ಯಾವಾಗ ಹೇಗೆ ಆಗುತ್ತೆ ಗೊತ್ತಿಲ್ಲ. ರಾತ್ರೋರಾತ್ರಿ ಘಟನೆಯಾದಾಗ ಊರವರು ಪೊಲೀಸ್ ಅಧಿಕಾರಿಗಳು ರಕ್ಷಣೆ ಕಾರ್ಯ ಮಾಡುತ್ತಾರೆ. ಆದರೆ ಇಂತಹ ಡೇಂಜರ್ ಪ್ರದೇಶಗಳಿದ್ದರೆ ಮೊದಲೇ ಜಿಲ್ಲಾಡಳಿತಕ್ಕೆ ತಿಳಿಸಿದರೆ ಕ್ರಮ ಜರುಗಿಸಲಾಗುವುದು. ಇದಕ್ಕಾಗಿ ಜನರೇ ಜಾಗೃತರಾಗಬೇಕಾಗಿದೆ" ಎಂದು ಹೇಳಿದರು.
"ಮಳೆ ಈಗಷ್ಟೇ ಪ್ರಾರಂಭವಾಗಿದ್ದು ಮಾತ್ರ. ಅಷ್ಟರಲ್ಲೇ ದೊಡ್ಡ ದುರಂತ ಸಂಭವಿಸಿದೆ. ಇದು ನಮ್ಮೆಲ್ಲರಿಗೂ ಎಚ್ಚರಿಕೆಯ ಕರೆ ಗಂಟೆ. ಅದರಲ್ಲೂ ಮಂಗಳೂರು ಎತ್ತರ ತಗ್ಗು ಪ್ರದೇಶವಾಗಿದ್ದು ಈ ವಿಚಾರದಲ್ಲಿ ಜನರೇ ಸ್ವಯಂ ಜಾಗೃತರಾಗಬೇಕು. ಅಧಿಕಾರಿಗಳು ಆದಷ್ಟು ಅಪಾಯಕಾರಿ ಪ್ರದೇಶಕ್ಕೆ ಭೇಟಿ ನೀಡಿ ಜನರಿಗೆ ಎಚ್ಚರಿಕೆಗಳನ್ನು ನೀಡುತ್ತಾರೆ. ಆದರೆ ಇಂತಹ ಅಪಾಯಗಳ ಬಗ್ಗೆ ಜನರು ಸ್ವಯಂಪ್ರೇರಿತರಾಗಿಯೇ ಜಾಗರೂಕರಾಗಬೇಕು" ಎಂದರು.
"ಸರಕಾರಿ ಜಾಗದಲ್ಲಿ ಅಪಾಯಕಾರಿ ಸ್ಥಿತಿ ಇದ್ರೆ ಜನರು ಗಮನಕ್ಕೆ ತರಬೇಕು, ಅದನ್ನು ಸರಿ ಮಾಡಿಕೊಡುತ್ತೇವೆ. ಆದರೆ ಖಾಸಗಿ ಜಾಗದಲ್ಲಿ ಈ ರೀತಿ ಕಾಂಪೌಂಡ್ ಕುಸಿದಾಗ ನಮಗೇನು ಮಾಡೋದಕ್ಕೆ ಆಗಲ್ಲ. ಮನೆ ದುರಸ್ತಿ ನಿಟ್ಟಿನಲ್ಲಿ ಇಲ್ಲಿ ಮನೆ ಮಾಲೀಕರಿದ್ದಾರೆ. ಹಾಗಾಗಿ ನೇರ ಸಂತ್ರಸ್ತರಿಗೆ ಪರಿಹಾರ ನೀಡುವ ವಿಷಯ ಬರೋದಿಲ್ಲ. ಮನೆ ಮಾಲೀಕರಿಗೆ ದುರಸ್ತಿ ಮಾಡಲು ಬೇಕಿದ್ದರೆ ಪರಿಹಾರ ಕೊಡುತ್ತೇವೆ" ಎಂದು ಅಭಿಪ್ರಾಯಪಟ್ಟರು.
"ಮಂಗಳೂರಿನ ಈ ಘಟನೆ ಇಡೀ ಕರಾವಳಿಗೆ ಸಂದೇಶವಾಗಿದೆ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಡೇಂಜರ್ ಇದೆ ಅಂದ್ರೆ ದೂರ ನಿಂತು ಸರಕಾರಕ್ಕೆ ತಿಳಿಸಬೇಕು. ಏನೇ ವ್ಯವಸ್ಥೆ ಇದ್ರೂ ಪ್ರಕೃತಿ ವಿಕೋಪ ಆದಾಗ ಏನೂ ಮಾಡೋಕೆ ಆಗಲ್ಲ. ಏನೂ ಆಗಬಾರದು ಅನ್ನೋದೇ ನಮ್ಮ ಪ್ರಾರ್ಥನೆ ಎಂದು ಹೇಳಿದ ಖಾದರ್, ತೊಕ್ಕೊಟ್ಟು ತಡೆಗೋಡೆ ಕುಸಿದ ಪ್ರದೇಶಕ್ಕೆ ಭೇಟಿ ನೀಡುತ್ತೇನೆ. ಖಾಸಗಿಯವರು ಕಟ್ಟಿದ ಕಟ್ಟಡದಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಅದಕ್ಕೆ ಅವರೇ ಹೊಣೆ ಆಗುತ್ತಾರೆ. ಈ ಬಗ್ಗೆ ಕ್ರಮ ಜರುಗಿಸಲು ಕಂದಾಯ ಸಚಿವರೊಂದಿಗೆ ಚರ್ಚೆ ಮಾಡಿದ್ದೇನೆ" ಎಂದು ವಿವರಿಸಿದರು.