ಸುಳ್ಯ, ಜೂ. 29 (DaijiworldNews/AK): ಸುಳ್ಯ ನಗರದ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಕೆಳ ಭಾಗವಾಗಿ ಸರಕಾರಿ ಪದವಿಪೂರ್ವ ಕಾಲೇಜಿನ ಕಡೆಗೆ ತೆರಳುವ ರಸ್ತೆಯಲ್ಲಿ ವಿದ್ಯುತ್ ಕಂಬಗಳನ್ನು ಸೇರಿಸಿ ಕಾಂಕ್ರೀಟೀಕರಣ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.


ಈ ರಸ್ತೆಯಲ್ಲಿ ಕೆಲವು ಭಾಗ ಇತ್ತೀಚೆಗೆ ಕಾಂಕ್ರೀಟ್ ಮಾಡಲಾಗಿದೆ. ಆದರೆ ಕಾಂಕ್ರೀಟ್ ನಡೆದ ಭಾಗದಲ್ಲಿ ಇದ್ದ ವಿದ್ಯುತ್ ಕಂಬವನ್ನು ಸ್ಥಳಾಂತರ ಮಾಡದೆ ವಿದ್ಯುತ್ ಕಂಬವನ್ನು ಸೇರಿಸಿ ಕಾಂಕ್ರೀಟ್ ಮಾಡಿ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಕಂಬವನ್ನು ಹಾಗೆಯೇ ಉಳಿಸಿ ಅಗಲೀಕರಣ ಮಾಡಿ ಕಾಂಕ್ರೀಟ್ ಮಾಡಲಾಗಿದ್ದು ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ಸವಾರರು ಆತಂಕ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಕಂಬವನ್ನು ಸ್ಥಳಾಂತರ ಮಾಡದೆ ವಿದ್ಯುತ್ ಕಂಬವನ್ನು ಸೇರಿಸಿ ಕಾಂಕ್ರೀಟ್ ಮಾಡಿ ರಸ್ತೆ ಅಭಿವೃದ್ಧಿ ಮಾಡಿರುವುದನ್ನು ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಶಾಸಕರು ಅಧಿಕಾರಿಗಳಿಂದ ಮಾಹಿತಿ ಪಡೆದರು. ವಿದ್ಯುತ್ ಕಂಬವನ್ನು ಸ್ಥಳಾಂತರ ಮಾಡದೆ ಕಾಂಕ್ರೀಟೀಕರಣ ಮಾಡಿರುವುದು ಅಪಾಯಕಾರಿಯಾಗಿದೆ. ಆದುದರಿಂದ ವಿದ್ಯುತ್ ಕಂಬಗಳನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸೂಚಿಸಿದರು.
ಸುಳ್ಯ ನಗರದಲ್ಲಿ ರಸ್ತೆ ಮಧ್ಯೆಯ ವಿದ್ಯುತ್ ಕಂಬ ಸ್ಥಳಾಂತರಿಸದೆ ವಿದ್ಯುತ್ ಕಂಬವನ್ನೂ ಸೇರಿಸಿ ರಸ್ತೆ ಕಾಂಕ್ರೀಟ್ ಮಾಡಿರುವುದು ಗಂಭೀರ ವಿಚಾರ ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ತಾ.ಪಂ.ಇಒ ರಾಜಣ್ಣ ಅವರಿಗೆ ಸೂಚಿಸಿದರು.