ಬೈಂದೂರು, ಜೂ. 01 (DaijiworldNews/AA): ಕುಟುಂಬದವರೊಂದಿಗೆ ಪ್ರವಾಸಕ್ಕೆ ಬಂದಿದ್ದ ಹಾವೇರಿ ಮೂಲದ 16 ವರ್ಷದ ವಿದ್ಯಾರ್ಥಿಯೊಬ್ಬ, ಸೋಮವಾರ ಬೆಳಗ್ಗೆ ಶಿರೂರಿನ ಸಂಕದಗುಂಡಿ ನದಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ.

ಹಾವೇರಿ ಸಮೀಪದ ಕೃಷಿ ನಗರದ ನಿವಾಸಿ ಆಯುಷ್ (16) ಮೃತಪಟ್ಟ ದುರ್ದೈವಿ.
ಹಾವೇರಿಯಿಂದ ಒಟ್ಟು ಏಳು ಜನರ ತಂಡ ಮುರುಡೇಶ್ವರ ಮತ್ತು ಕನ್ಯಾಕುಮಾರಿ ಪ್ರವಾಸ ಕೈಗೊಂಡಿತ್ತು. ಮುರುಡೇಶ್ವರ ದರ್ಶನ ಮುಗಿಸಿ ವಾಪಸಾಗುತ್ತಿದ್ದಾಗ, ಅವರು ವಿಶ್ರಾಂತಿ ಪಡೆಯಲು ಶಿರೂರಿನ ಸಂಕದಗುಂಡಿ ನದಿಯ ಬಳಿ ತಂಗಿದ್ದರು. ಕುಟುಂಬದ ಸದಸ್ಯರು ಮಧ್ಯಾಹ್ನದ ಅಡುಗೆ ತಯಾರಿಯಲ್ಲಿ ನಿರತರಾಗಿದ್ದಾಗ, ಇಬ್ಬರು ಮಕ್ಕಳು ಸ್ನಾನ ಮಾಡಲು ಪಕ್ಕದ ನದಿಗೆ ಇಳಿದಿದ್ದಾರೆ.
ಈ ವೇಳೆ ನೀರಿನ ಆಳದ ಅರಿವಿಲ್ಲದೆ ಆಯುಷ್ ನದಿಯ ಆಳವಾದ ಭಾಗಕ್ಕೆ ಈಜಲು ಹೋಗಿ ಮುಳುಗಿದ್ದಾನೆ. ಅವನೊಂದಿಗಿದ್ದ ಸಹೋದರ ತಕ್ಷಣವೇ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಆದರೆ ಆತನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಮೃತ ಬಾಲಕನ ಪೋಷಕರು ಗುಜರಾತ್ನಲ್ಲಿ ಸಣ್ಣ ವ್ಯಾಪಾರ ನಡೆಸುತ್ತಿದ್ದು, ಆಯುಷ್ ಅಲ್ಲಿಯೇ ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿದ್ದ. ಆತ ತನ್ನ ತಾಯಿ ಮತ್ತು ಇನ್ನೊಬ್ಬ ಸಹೋದರ ಸೇರಿದಂತೆ ಒಟ್ಟು ಏಳು ಜನರೊಂದಿಗೆ ಪ್ರವಾಸಕ್ಕೆ ಆಗಮಿಸಿದ್ದ.
ನದಿ ತೀರಾ ಆಳವಾಗಿದ್ದರಿಂದ, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯ ನಿವಾಸಿಗಳು ಜಂಟಿಯಾಗಿ ಸುಮಾರು ಒಂದು ಗಂಟೆಗಳ ಕಾಲ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಸುದೀರ್ಘ ಕಾರ್ಯಾಚರಣೆಯ ಬಳಿಕ ಕೊನೆಗೂ ಬಾಲಕನ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿದೆ.
ಘಟನಾ ಸ್ಥಳಕ್ಕೆ ಬೈಂದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.