Karavali
'ಮಂಗಳೂರಿನಲ್ಲೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯಾಗಬೇಕು'-ಶಾಸಕ ವೇದವ್ಯಾಸ ಕಾಮತ್
- Thu, May 21 2026 01:46:23 PM
-
ಮಂಗಳೂರು, ಮೇ. 21 (DaijiworldNews/AK):ಕರಾವಳಿ ಭಾಗದ ಜನರಿಗೆ ಶೀಘ್ರಗತಿಯಲ್ಲಿ ನ್ಯಾಯದಾನ ಒದಗಿಸಲು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯಾಗಬೇಕು ಎಂಬ ಮಂಗಳೂರು ವಕೀಲರ ಸಂಘದ ಹಲವು ವರ್ಷಗಳ ಬೇಡಿಕೆಯು ಎಲ್ಲಾ ರೀತಿಯಿಂದಲೂ ನ್ಯಾಯಯುತವಾಗಿದೆ ಅಂತೆಯೇ ಇಡೀ ಮಂಗಳೂರಿನ ಜನತೆಯ ಪರವಾಗಿ ನನ್ನ ಆಗ್ರಹವೂ ಅದೇ ಆಗಿದ್ದು, ಅದರಲ್ಲಿ ಯಾವುದೇ ರಾಜಿಯಿಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.


ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಆರಂಭದಿಂದಲೂ ರಾಜಕೀಯ ರಹಿತವಾಗಿ ನಡೆದುಕೊಂಡು ಬಂದ ಈ ಹೋರಾಟದ ಪ್ರತೀ ಹೆಜ್ಜೆಯಲ್ಲೂ ವಕೀಲರ ಸಂಘದ ಜೊತೆ ನಿಂತು ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವರಾದ ಎಚ್.ಕೆ. ಪಾಟೀಲ್ ರವರಿಗೆ ಜಿಲ್ಲೆಯ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು ಹಾಗೂ ಪ್ರಮುಖರ ಉಪಸ್ಥಿತಿಯಲ್ಲಿ ಮನವಿ ಸಲ್ಲಿಸಿದ್ದು ಮಾತ್ರವಲ್ಲದೇ, ವೈಯಕ್ತಿಕವಾಗಿ ಹಾಗೂ ಅಧಿವೇಶನದಲ್ಲೂ ಸರ್ಕಾರವನ್ನು ಹಲವು ಬಾರಿ ಆಗ್ರಹಿಸಿದ್ದೇನೆ ಎಂದರು.ಈ ನಡುವೆ ಮುಖ್ಯಮಂತ್ರಿಗಳು ನಮ್ಮೆಲ್ಲರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಸ್ವಾಗತಾರ್ಹವಾಗಿದ್ದು, ಇಂತಹ ಸಂದರ್ಭದಲ್ಲಿ, ಒಂದಷ್ಟು ಜನರು ಮಂಗಳೂರಿನ ಬದಲು, ಬೇರೆ ಜಿಲ್ಲೆಯಲ್ಲಿ ಸಂಚಾರಿ ಪೀಠವನ್ನು ಆರಂಭಿಸಿ ಎಂದು ಆಗ್ರಹಿಸುತ್ತಿರುವುದು ಸರಿಯಲ್ಲ, ಮತ್ತು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಮಂಗಳೂರು ಎಂಬುದು ಬಸ್ಸು, ರೈಲು, ವಿಮಾನ ಹೀಗೆ ಎಲ್ಲಾ ರೀತಿಯಲ್ಲೂ ಉತ್ತಮ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವ ನಗರ. ಹಳೆಯ ಜಿಲ್ಲಾಧಿಕಾರಿ ಕಚೇರಿಯ ಆವರಣವು ಎಲ್ಲಾ ರೀತಿಯಲ್ಲಿ ಸೂಕ್ತವಾಗಿದ್ದು, ಇಲ್ಲಿರುವ ಮೂಲಭೂತ ಸೌಕರ್ಯಗಳು ಸಹ ಹೈಕೋರ್ಟ್ ಸಂಚಾರಿ ಪೀಠಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ. ಹಾಗಾಗಿ ಈ ವಿಷಯದಲ್ಲಿ ಸ್ಪೀಕರ್, ಸಂಸದರು, ವಿಧಾನಪರಿಷತ್ ಸದಸ್ಯರು, ಎಲ್ಲಾ ರಾಜಕೀಯ ಪಕ್ಷಗಳು, ಎಲ್ಲಾ ನಾಯಕರುಗಳು, ಹಿರಿಯರು ಮುಖಂಡರು ಸೇರಿಕೊಂಡು, ಒಕ್ಕೊರಲಿನಿಂದ ನಮ್ಮ ಬೇಡಿಕೆಯನ್ನು ಇನ್ನಷ್ಟು ಗಟ್ಟಿಯಾಗಿ ಸರ್ಕಾರದ ಮುಂದಿಡುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಒಟ್ಟಿನಲ್ಲಿ ಮಂಗಳೂರಿನ ವಕೀಲರ ಸಂಘದ ನಿರಂತರ ಹೋರಾಟ, ತಾಳ್ಮೆ, ಸಂಯಮಕ್ಕೆ ನನ್ನ ವೈಯಕ್ತಿಕ ಅಭಿನಂದನೆಗಳನ್ನು ಸಲ್ಲಿಸುತ್ತಾ, ಮಂಗಳೂರಿನಲ್ಲಿಯೇ ಹೈಕೋರ್ಟ್ ಪೀಠ ಸ್ಥಾಪನೆ ಆಗಬೇಕು ಎಂಬುದು ನಮ್ಮ ದೃಢ ನಿಲುವಾಗಿದ್ದು, ಇನ್ನು ಮುಂದಕ್ಕೂ ಆ ನಿಟ್ಟಿನಲ್ಲಿ ಎಂದಿನಂತೆ ಸಂಪೂರ್ಣ ಸಹಕಾರ ನೀಡುತ್ತೇನೆ.
ಎಂದರುಪಾಲಿಕೆ ವ್ಯಾಪ್ತಿಯಲ್ಲಿ ಮಳೆಗಾಲದ ಪೂರ್ವ ಸಿದ್ಧತೆಯಲ್ಲೂ ನಿರ್ಲಕ್ಷ್ಯ:-
ಮಳೆಗಾಲಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ಪಾಲಿಕೆ ವ್ಯಾಪ್ತಿಯ ರಾಜಕಾಲುವೆಗಳಲ್ಲಿ ಹಾಗೂ ಚರಂಡಿಗಳಲ್ಲಿ ಹೂಳೆತ್ತುವುದು, ಪ್ರತೀ ವಾರ್ಡ್ ಗಳಿಗೆ ಗ್ಯಾಂಗ್ ಮೆನ್ ನೇಮಿಸುವುದು, ಸೇರಿದಂತೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಅನೇಕ ಬಾರಿ ಸೂಚಿಸಿದ ಹೊರತಾಗಿಯೂ ಪಾಲಿಕೆಯ ಆಡಳಿತ ಆ ಬಗ್ಗೆ ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸದಿರುವುದು ಖಂಡನೀಯ.
ಅದರಲ್ಲೂ ಮುಖ್ಯವಾಗಿ ಮಳೆಗಾಲದಲ್ಲಿ ಪಾಲಿಕೆ ವ್ಯಾಪ್ತಿಯ ಪ್ರತಿ ವಾರ್ಡ್ ಗಳಲ್ಲಿ ಮುಖ್ಯವಾಗಿ ಇರಬೇಕಿದ್ದ ಗ್ಯಾಂಗ್ ಮೆನ್ ಗಳ ಟೆಂಡರ್ ಪ್ರಕ್ರಿಯೆಯನ್ನೇ ಇನ್ನೂ ಸಹ ಕೈಗೆತ್ತಿಕೊಳ್ಳದಿರುವುದು ಆಡಳಿತ ವೈಫಲ್ಯ ಹಾಗೂ ನಿರ್ಲಕ್ಷ್ಯವನ್ನು ಸೂಚಿಸುತ್ತದೆ. ಹೂಳೆತ್ತುವ ಕಾಮಗಾರಿಯೂ ಸಹ ಕಾಟಾಚಾರಕ್ಕೆ ಮಾತ್ರ ಎಂಬಂತಾಗಿದ್ದು, ಅದು ಒಮ್ಮೆ ಮಾತ್ರ ನಡೆಸುವ ಪ್ರಕ್ರಿಯೆ ಅಲ್ಲ. ಟೆಂಡರ್ ನ ಷರತ್ತಿನಲ್ಲಿ ಮಳೆಗಾಲ ಮುಗಿಯುವ ತನಕ ಕಾಲಕಾಲಕ್ಕೆ ಹೂಳೆತ್ತಬೇಕು ಎಂಬ ನಿಯಮವಿದೆ. ಕೆಲವು ಕಡೆ ಜೆಸಿಬಿ ಹೋಗಲಾಗದ ಸ್ಥಳಗಳಲ್ಲಿ ಹೂಳೆತ್ತದೇ, ಮುಂದಕ್ಕೆ ಹೋಗುವ ಉದಾಹರಣೆ ಸಾಕಷ್ಟಿವೆ. ಇದು ಹೀಗೆ ಮುಂದುವರಿದರೆ ಮಳೆಯ ಸಂದರ್ಭದಲ್ಲಿ ಕೃತಕ ನೆರೆಗೆ ಕಾರಣವಾಗುತ್ತದೆ. ಪಾಲಿಕೆ ಅಧಿಕಾರಿಗಳು ಇದರ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಆಗ್ರಹಿದರು.ಇತ್ತೀಚಿಗೆ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೃಹತ್ ತಡೆಗೋಡೆಯೊಂದು ಕುಸಿದು ಸಾರ್ವಜನಿಕರ ಜೀವ ಹಾನಿಯಾಗಿತ್ತು. ಇಂತಹ ದುರ್ಘಟನೆಗಳು ಮಂಗಳೂರಿನಲ್ಲಿ ಮರುಕಳಿಸದಂತೆ ನಗರ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಸಹಿತ ಎಲ್ಲಾ ರೀತಿಯ ಕ್ರಮವಹಿಸಬೇಕಾದ ಅನಿವಾರ್ಯತೆಯಿದೆ. ಆದರೆ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಬಗ್ಗೆ ಕನಿಷ್ಠ ಕಾಳಜಿಯೂ ಇದ್ದಂತೆ ಕಾಣುತ್ತಿಲ್ಲ ಎಂದು ಟೀಕಿಸಿದರು.
ಅಭಿವೃದ್ಧಿಯೆಡೆಗಿನ ಬಿಜೆಪಿ ಸರ್ಕಾರದ ಬದ್ಧತೆ:-
ಮಂಗಳೂರಿನ ಕದ್ರಿಹಿಲ್ಸ್ ನಲ್ಲಿರುವ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ 20.85 ಕೋಟಿ ವೆಚ್ಚದಲ್ಲಿ ನೂತನ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯ (ಕೆ.ಜಿ.ಟಿ.ಟಿ.ಐ.) ಸ್ವಂತ ಕಟ್ಟಡವು ಉದ್ಘಾಟನೆಗೆ ಸಿದ್ದವಾಗಿದ್ದು, ಇದು ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಅಭಿವೃದ್ಧಿಯೆಡೆಗಿನ ಬದ್ಧತೆಯಾಗಿದೆ. ಈ ಕಟ್ಟಡಕ್ಕೆ 2019 ರಲ್ಲಿ 2 ಎಕರೆ ಜಮೀನು ನೀಡುವಲ್ಲಿಂದ ಹಿಡಿದು, 2021 ರಲ್ಲಿ 15.23 ಕೋಟಿ ಅನುದಾನ ಮಂಜೂರು ಮಾಡಿದ್ದು ಹಾಗೂ 2022 ರಲ್ಲಿ ಪರಿಷ್ಕೃತ ಆದೇಶದಲ್ಲಿ 20.85ಕೋಟಿ ಅನುದಾನ ಮಂಜೂರುಗೊಳಿಸಿ ಅಂದಿನ ಬಿಜೆಪಿ ಸರ್ಕಾರವು ಸಂಪೂರ್ಣ ಸಹಕಾರ ನೀಡಿದು ಸ್ಮರಣಾರ್ಹ.ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :-
ರಾಜ್ಯದಲ್ಲಿ ಕಳೆದ 3 ತಿಂಗಳಿಂದ ವೃದ್ಧಾಪ್ಯ ವೇತನ, ಲಿಂಗತ್ವ ಅಲ್ಪಸಂಖ್ಯಾತರು, ವಿಧವಾ ವೇತನ, ನಿವೃತ್ತ ನೌಕರರ ಪಿಂಚಣಿ, ಹೀಗೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಹಾಗೂ ಮಾಸಾಶನಗಳು ಸ್ಥಗಿತಗೊಂಡಿದೆ. ಅದನ್ನೇ ನಂಬಿ ಜೀವನ ಸಾಗಿಸುವವರು ಸಂಕಷ್ಟದಲ್ಲಿದ್ದರೆ, ಕಾಂಗ್ರೆಸ್ ಸರ್ಕಾರ ಮಾತ್ರ ಸಾಧನಾ ಸಮಾವೇಶ ಮಾಡಿಕೊಂಡು ಆ ಬಡ ಜನರ ಹೊಟ್ಟೆ ಉರಿಸುತ್ತಿದೆ.
ಜನರು ನಮಗೆ ಬರಬೇಕಿರುವ ಪಿಂಚಣಿ ಕೊಡಿ ಎಂದು ಅಧಿಕಾರಿಗಳ ಮುಂದೆ ಹೋದರೆ, ಸರ್ಕಾರದಿಂದ ಬರದಿದ್ದರೆ ನಾವೇನು ಮಾಡಬೇಕು ಎಂದು ಅಧಿಕಾರಿಗಳು ಉತ್ತರ ನೀಡುತ್ತಾರೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಪ್ರೇಮಾನಂದ ಶೆಟ್ಟಿ, ಪೂರ್ಣಿಮಾ ಎಂ. ರವಿಶಂಕರ್ ಮಿಜಾರ್, ಮೋಹನ್ ಪೂಜಾರಿ, ಪ್ರವೀಣ್ ನಿಡ್ಡೆಲ್,, ಸುರೇಖಾ ಎಂ.ಎಸ್, ನಿತಿನ್ ಕುಮಾರ್ ಉಪಸ್ಥಿತರಿದ್ದರು