ಬಂಟ್ವಾಳ, ಏ. 27 (DaijiworldNews/TA): ಕೆ.ಎಸ್ .ಆರ್.ಟಿ.ಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೋರ್ವರ ಲಕ್ಷಾಂತರ ರೂ ಮೌಲ್ಯದ ನಗ ಹಾಗೂ ನಗದು ಇರಿಸಿದ್ದ ಪರ್ಸ್ ಕಳವಾಗಿದ ಘಟನೆ ನಡೆದಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಾಗೆಕಾನ ಬಲ್ಯ ನಿವಾಸಿ ಕ್ರಿಸ್ತಿನ್ ವೇಗಸ್ ಅವರ ಪರ್ಸ್ ಕಳವಾಗಿದೆ. ಪರ್ಸ್ ನಲ್ಲಿ ಐದೂವರೆ ಪವನ್ ತೂಕದ ಚಿನ್ನದ ಕರಿಮಣಿ ಸರ ಮತ್ತು ನಾಲ್ಕು ಗ್ರಾಂ ತೂಕದ ಚಿನ್ನದ ಉಂಗುರ ಒಟ್ಟು 48 ಗ್ರಾಂ ತೂಕದ ಚಿನ್ನಾಭರಣದ ಅಂದಾಜು ಮೌಲ್ಯ 6,24,000 ರೂ. ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇವರು ಗಂಡನ ಜೊತೆ ಉಜಿರೆಯಲ್ಲಿ ಸಂಬಂಧಿಕರ ಮೆಹಂದಿ ಕಾರ್ಯಕ್ರಮಕ್ಕೆ ಹೋಗಿ ವಾಪಸ್ ಮಂಗಳೂರು ಕಡೆಗೆ ಬರುವ ಬಸ್ ನಲ್ಲಿ ಘಟನೆ ಸಂಭವಿಸಿದೆ. ಇವರು ಬಿ.ಸಿ.ರೋಡಿನಲ್ಲಿ ಬಸ್ ಇಳಿದು ನೋಡುವಾಗ ಕಳವಾದ ವಿಚಾರ ಬೆಳಕಿಗೆ ಬಂದಿದ್ದು ಈ ನಡುವೆ ಕಳ್ಳತನ ಆಗಿರುವ ಸಂಶಯವನ್ನು ಅವರು ದೂರಿನಲ್ಲಿ ತಿಳಿಸಿದ್ದಾರೆ.