ಉಳ್ಳಾಲ, ಏ. 14 (DaijiworldNews/AA): ತೊಕ್ಕೊಟ್ಟುವಿನಲ್ಲಿ ನಡೆದ ಆರಿಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅರ್ಷದ್, ಪುಚ್ಚೆ ನಿಸಾಕ್, ಜುನೈದ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಾಳಿಯಲ್ಲಿ ಈ ಮೂವರು ಭಾಗಿಯಾಗಿದ್ದಾರೆ ಎಂಬ ಶಂಕೆಯ ಮೇರೆಗೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರು ವಶಕ್ಕೆ ಪಡೆದವರ ಪೈಕಿ ಅರ್ಷದ್ ಎಂಬಾತ ಆರೋಪಿಗಳಿಗೆ ಶಸ್ತ್ರಾಸ್ತ್ರ, ಪೊಲೀಸರ ಚಲನವಲನದ ಮಾಹಿತಿ, ಸಾರಿಗೆ ಮತ್ತು ಹಣವನ್ನು ಒದಗಿಸಿದ್ದ ಎಂದು ತಿಳಿದು ಬಂದಿದೆ. ಅಲ್ಲದೆ ಪುಚ್ಚೆ ನಿಸಾಕ್ ಎಂಬಾತ ಫೆಬ್ರವರಿಯಲ್ಲಿ ಆರಿಫ್ ಮೇಲಿನ ಕೊಲೆ ಯತ್ನದಲ್ಲಿ ಭಾಗಿಯಾಗಿದ್ದ. 2022 ರಲ್ಲಿ ಆತನ ಮೇಲೆ ನಡೆಸಿದ ದಾಳಿಯಲ್ಲಿ ಶಾಮೀಲಾಗಿದ್ದ ಎನ್ನಲಾಗಿದೆ. ಇನ್ನು ಜುನೈದ್ ಎಂಬಾತ ಆರೋಪಿಗಳಿಗೆ ವಾಹನವನ್ನು ಒದಗಿಸಿದ್ದು ಫೆಬ್ರವರಿಯಲ್ಲಿ ನಡೆದ ಆರಿಫ್ ಕೊಲೆ ಯತ್ನ ನಡೆಸಿದ ತಂಡದಲ್ಲಿ ಶಾಮೀಲಾಗಿದ್ದ ಎಂದು ಕಮಿಷನ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.