ಬಂಟ್ವಾಳ, ಮಾ. 26 (DaijiworldNews/TA): ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ 1959 ರ ಪ್ರಕಾರ ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದುವುದು ಕಾನೂನಿಗೆ ವಿರುದ್ಧವಾಗಿದೆ. ಇತ್ತೀಚಿಗೆ ಸಜೀಪದ ತಲೆಮೊಗರು ಎಂಬಲ್ಲಿ ಮಸೀದಿ ಅಧ್ಯಕ್ಷರ ಪರವಾಗಿ ಖಡ್ಗ ಝಳಪಿಸಿ ಕೆಲವು ಯುವಕರು ಆತಂಕ ಸೃಷ್ಟಿಸಿದ್ದು ಅವರ ವಿರುದ್ಧ ಶೀಘ್ರವೇ ಕ್ರಮಕೈಗೊಳ್ಳಬೇಕೆಂದು ಮುಸ್ಲಿಂ ವಕೀಲರ ಒಕ್ಕೂಟ ದಕ್ಷಿಣ ಕನ್ನಡ ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ವರಿಷ್ಠಾಧಿಕಾರಿಯವರೊಂದಿಗೆ ಮನವಿ ಮಾಡಿಕೊಂಡಿದೆ.

ಈ ಯುವಕರಲ್ಲಿ ಹೆಚ್ಚಿನವರು ಅಧ್ಯಕ್ಷರ ಕುಟುಂಬದವರಾಗಿದ್ದು ಮಾದಕ ದ್ರವ್ಯ ವ್ಯಸನಿಗಳಾಗಿದ್ದಾರೆ. ಸಾರ್ವಜನಿಕವಾಗಿ ಖಡ್ಗ ಝಳಪಿಸುವ ಮೂಲಕ ಜನರಲ್ಲಿ ಆತಂಕ ಸೃಷ್ಟಿಸಲು ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದ ವೀಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದ್ದು ತಲವಾರು ಹಿಡಿದ ವ್ಯಕ್ತಿಗಳ ಮುಖವೂ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿದೆ.
ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ 1959 ರ ಪ್ರಕಾರ ಸಾರ್ವಜನಿಕವಾಗಿ ಖಡ್ಗ ಝಳಪಿಸಿದಲ್ಲಿ ಒಂದರಿಂದ ಮೂರು ವರ್ಷ ತನಕ ಜೈಲು ವಿಧಿಸಬಹುದಾಗಿದೆ. ಏಳು ವರ್ಷಗಳ ತನಕ ಜೈಲು ಶಿಕ್ಷೆಯನ್ನು ವಿಸ್ತರಿಸಬಹುದು. ವೀಡಿಯೋದಲ್ಲಿ ಕಾಣುವ ಎಲ್ಲಾ ವ್ಯಕ್ತಿಗಳ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಮುಸ್ಲಿಂ ವಕೀಲರ ಒಕ್ಕೂಟ ದಕ್ಷಿಣ ಕನ್ನಡ ಪೊಲೀಸ್ ಆಯುಕ್ತರು ಮತ್ತು ವರಿಷ್ಠಾಧಿಕಾರಿಗಳನ್ನು ಕೋರಿಕೊಂಡಿದೆ. ಒಂದು ವೇಳೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾದರೆ ರಾಜ್ಯ ಗೃಹ ಇಲಾಖೆ ಮತ್ತು ಸಂಬಂಧಿಸಿದ ನಾಯಕರುಗಳಿಗೆ ದೂರು ಮತ್ತು ಸಾಕ್ಷ್ಯ ವೀಡಿಯೋಗಳನ್ನು ಸಲ್ಲಿಸಲಾಗುವುದು ಎನ್ನಲಾಗಿದೆ.