ಬೈಂದೂರು, ಮಾ. 25 (DaijiworldNews/TA): ಬೈಂದೂರು - ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರ ತಲ್ಲೂರು ಸೇತುವೆಯ ತಡೆಗೋಡೆಗೆ ಮಹಾರಾಷ್ಟ್ರ ಮೂಲದ ಗೂಡ್ಸ್ ವಾಹನ ಢಿಕ್ಕಿಯಾದಾಗ ಅದರ ಹಿಂದೆ ಬರುತ್ತಿದ್ದ ಕಾರು ಅದಕ್ಕೆ ಢಿಕ್ಕಿಯಾದ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.

ಕಾರಿನಲ್ಲಿದ್ದ ಚಾಲಕ ಸಹಿತ ಪ್ರಯಾಣಿಕರು, ಗೂಡ್ಸ್ ವಾಹನ ಚಾಲಕ ಎಲ್ಲರೂ ಗಾಯಗೊಂಡು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೂಡ್ಸ್ ವಾಹನ ವೇಗವಾಗಿ ಬಂದು ಸೇತುವೆಯ ತಡೆಗೋಡೆಗೆ ಢಿಕ್ಕಿಯಾಗಿದೆ. ಹಿಂದಿನಿಂದ ಬಂದು ಢಿಕ್ಕಿಯಾದ ಕಾರಿನ ಏರ್ ಬ್ಯಾಗ್ ತೆಗೆದುಕೊಂಡಿದೆ. ಅಪಘಾತದ ತೀವ್ರತೆಗೆ ಕಾರು ಹಾಗೂ ಗೂಡ್ಸ್ ವಾಹನಗಳೆರಡು ನಜ್ಜು ಗುಜ್ಜಾಗಿದೆ.
ಘಟನಾ ಸ್ಥಳಕ್ಕೆ ಕುಂದಾಪುರ ಸಂಚಾರ ಠಾಣೆ ಎಸ್ ಐ ಅನೂಪ್ ನಾಯಕ್ ಹಾಗೂ ಸಿಬಂದಿ ಭೇಟಿ ನೀಡಿದರು. ಸಂಚಾರ ದಟ್ಟಣೆ ವೇಳೆ ಅಪಘಾತ ನಡೆದ ಕಾರಣ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿ ವಾಹನಗಳು ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿದ್ದವು.