ಉಡುಪಿ, ಮಾ. 15 (DaijiworldNews/AA): ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತೂರಿನ ಮಾಯಾ ಗುಂಡಿ ಎಂಬಲ್ಲಿರುವ ನೀರಿನ ಗುಂಡಿಗೆ ಹಾರಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ಭಾನುವಾರ ಮುಂಜಾನೆ ರಕ್ಷಿಸಲಾಗಿದೆ.

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಗುಂಡಿಗೆ ಹಾರಲು ಯತ್ನಿಸುತ್ತಿರುವುದನ್ನು ಗಮನಿಸಿದ ಸ್ಥಳೀಯ ಸಮಾಜ ಸೇವಕ ವಿಶು ಶೆಟ್ಟಿ ಅವರು ತಕ್ಷಣ ತುರ್ತು ಸಹಾಯವಾಣಿ 'ಡಯಲ್ 112' ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಪೊಲೀಸರ ನೆರವಿನೊಂದಿಗೆ ವ್ಯಕ್ತಿಯನ್ನು ಯಶಸ್ವಿಯಾಗಿ ರಕ್ಷಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆ ಮತ್ತು ನಿಗಾವಹಿಸಲು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಚಾರಣೆಯ ವೇಳೆ ಆತ ತನ್ನ ಹೆಸರು ರಾಮಚಂದ್ರ (38) ಎಂದು ಹೇಳಿಕೊಂಡಿದ್ದು, ತಾನು ಕುಮಟಾ ಮೂಲದವನೆಂದು ತಿಳಿಸಿದ್ದಾನೆ. ಸದ್ಯ ಆತ ಅತಿಯಾದ ಭಯ ಮತ್ತು ಗೊಂದಲದ ಸ್ಥಿತಿಯಲ್ಲಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವ್ಯಕ್ತಿಯ ಬಗ್ಗೆ ಮಾಹಿತಿ ಇರುವವರು ಅಥವಾ ಆತನ ಸಂಬಂಧಿಕರು ಕೂಡಲೇ ಉಡುಪಿ ನಗರ ಪೊಲೀಸ್ ಠಾಣೆ ಅಥವಾ ಜಿಲ್ಲಾ ಆಸ್ಪತ್ರೆಯನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ಮನವಿ ಮಾಡಿದ್ದಾರೆ.