ಸುಳ್ಯ, ಮಾ. 15 (DaijiworldNews/TA): ಶ್ರೀರಾಂ ಪೇಟೆಯಲ್ಲಿರುವ ಬಾರ್ ಮುಂಭಾಗದಲ್ಲಿ ನಿಂತಿದ್ದ ಯುವಕರಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

ನಗರದ ಶ್ರೀರಾಂ ಪೇಟೆಯಲ್ಲಿರುವ ಬಾರೊಂದರ ಎದುರುಗಡೆ ನಿಂತಿದ್ದ ಯುವಕನೋರ್ವನಿಗೆ ಚೂರಿಯಿಂದ ಇರಿದ ಘಟನೆ ಶನಿವಾರ ರಾತ್ರಿ ನಡೆದಿತ್ತು. ಚೂರಿ ಇರಿತಕ್ಕೊಳಗಾದ ಯುವಕರನ್ನು ಸುಳ್ಯ ಬೀರಮಂಗಲ ಬಂಗ್ಲಗುಡ್ಡೆ ನಿವಾಸಿಗಳಾದ ಹರೀಶ್ ಬಂಗ್ಲಗುಡ್ಡೆ ಹಾಗೂ ನಿತೇಶ್ ಕೆ.ಆರ್. ಬಂಗ್ಲಗುಡ್ಡೆ ಎಂದು ಗುರುತಿಸಲಾಗಿದೆ. ಗಾಯಗೊಂಡ ಇಬ್ಬರನ್ನು ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಪಿಗಳಾದ ಅಜ್ಜಾವರ ಗ್ರಾಮದ ಕಾಂತಮಂಗಲ ಗಂಧದಗುಡ್ಡೆ ನಿವಾಸಿಗಳಾದ ದಯಾನಂದ ಮತ್ತು ರಾಜೇಶ್ ಬಿ.ಆರ್. ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.