ಬಂಟ್ವಾಳ, ಮಾ. 15 (DaijiworldNews/TA): ವಿಶ್ವ ಶಾಂತಿಗಾಗಿ ವಿಶೇಷ ಉಪವಾಸ ಮತ್ತು ಪ್ರಾರ್ಥನಾ ದಿನವನ್ನು ಬಂಟ್ವಾಳದ ಫರ್ಲಾದ ವೆಲಂಕಣಿ ಆರೋಗ್ಯ ಮಾತೆಯ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ಧರ್ಮಗುರುಗಳಾದ ವಂ. ಅರುಣ್ ಮಾರ್ಕ್ ಡಿ’ಸೋಜ ಅವರ ಮಾರ್ಗದರ್ಶನದಲ್ಲಿ ಆಚರಿಸಲಾಯಿತು.






ಬೆಳಗ್ಗೆ 7:00 ಗಂಟೆಯಿಂದಲೇ ಭಕ್ತರು ಒಗ್ಗೂಡಿ ವಿಶ್ವದಲ್ಲಿ ಶಾಂತಿ ನೆಲೆಸಲೆಂದು ಪ್ರಾರ್ಥನೆ ಸಲ್ಲಿಸಿದರು. ಈ ದಿನದ ಆಚರಣೆಯಲ್ಲಿ ನಿರಂತರ, ಪರಮ ಪ್ರಸಾದರ ಆರಾದನೆ, ಪವಿತ್ರ ಜಪಮಾಲೆಯ ಪಠಣ ಹಾಗೂ ವೆಲಂಕಣಿ ಮಾತೆಯವರ ಗೌರವಾರ್ಥ ನೊವೆನಾ ಪ್ರಾರ್ಥನೆಗಳನ್ನು ನಡೆಸಲಾಯಿತು. ವಿಶ್ವದ ವಿವಿಧ ದೇಶಗಳಲ್ಲಿ ಶಾಂತಿ ಸ್ಥಾಪನೆಯಾಗಲೆಂದು ಹಾಗೂ ಸಂಕಷ್ಟದಲ್ಲಿರುವ ಪ್ರದೇಶಗಳಿಗೆ ಸೌಹಾರ್ದ ಮತ್ತು ಆರೈಕೆ ದೊರಕಲೆಂದು ಭಕ್ತರು ಬೇಡಿಕೊಂಡರು. ಚರ್ಚ್ ವ್ಯಾಪ್ತಿಯ ವಿವಿಧ ವಾರ್ಡ್ ಗಳು ಹಾಗೂ ಕುಟುಂಬಗಳಿಂದ ಬಂದ ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡು ಪವಿತ್ರ ಬಲಿಪೀಠದ ಸನ್ನಿಧಿಯಲ್ಲಿ ಮೌನ ಪ್ರಾರ್ಥನೆ ಮತ್ತು ಧ್ಯಾನದಲ್ಲಿ ತೊಡಗಿದರು.
ದಿನವಿಡೀ ಚರ್ಚ್ ಭಕ್ತರಿಗೆ ತೆರೆದಿಡಲಾಗಿದ್ದು, ತಮ್ಮ ವೈಯಕ್ತಿಕ ಉದ್ದೇಶಗಳನ್ನು ದೇವರಿಗೆ ಅರ್ಪಿಸಲು ಅವಕಾಶ ನೀಡಲಾಯಿತು. ಇದರಿಂದ ಚರ್ಚ್ ಆವರಣದಲ್ಲಿ ಭಕ್ತಿ, ನಿರೀಕ್ಷೆ ಮತ್ತು ಆಧ್ಯಾತ್ಮಿಕ ಏಕತೆಯ ಗಂಭೀರ ವಾತಾವರಣ ನಿರ್ಮಾಣವಾಯಿತು. ಸಂಜೆಯ ಸಮಯದಲ್ಲಿ ನಡೆದ ಭವ್ಯ ಮೇಣದ ದೀಪಗಳ ಮೆರವಣಿಗೆ ಈ ದಿನದ ಪ್ರಮುಖ ಆಕರ್ಷಣೆಯಾಗಿತ್ತು. ಭಕ್ತರು ಕೈಯಲ್ಲಿ ಬೆಳಗಿದ ಮೇಣದ ದೀಪಗಳನ್ನು ಹಿಡಿದು ಮೇರಿಯವರ ಭಕ್ತಿಗೀತೆಗಳನ್ನು ಹಾಡುತ್ತಾ ಶಾಂತಿಗಾಗಿ ಪ್ರಾರ್ಥಿಸುತ್ತ ಮೆರವಣಿಗೆಯಲ್ಲಿ ಭಾಗವಹಿಸಿದರು. ಮೆರವಣಿಗೆ ಅಂತಿಮ ಆಶೀರ್ವಾದ ಮತ್ತು ಮೇರಿಯವರ ಪಾದಗಳಿಗೆ ಸಮರ್ಪಣೆಯೊಂದಿಗೆ ಸಮಾಪ್ತಿಯಾಯಿತು.